ಮುದ್ದೇಬಿಹಾಳ: ತಾಲ್ಲೂಕಿನ ಪ್ರಮುಖ ರಸ್ತೆಗಳನ್ನು ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಶುಕ್ರವಾರ ಹತ್ತನೆಯ ದಿನಕ್ಕೆ ಕಾಲಿರಿಸಿದೆ.
ಸತ್ಯಾಗ್ರಹದ ಸ್ಥಳಕ್ಕೆ ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಭೇಟಿ ನೀಡಿ ಸತ್ಯಾಗ್ರಹಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ತಾವೂ ಸಹ ಈ ಸಂಬಂಧ ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳನ್ನು ಭೇಟಿ ಮಾಡಿ, ರಸ್ತೆಗಳ ಪ್ಯಾಚ್ ವರ್ಕ್ (ತೇಪೆ ಹಚ್ಚುವ) ಬದಲಿಗೆ ಶಾಶ್ವತವಾಗಿ ಮರು ನಿರ್ಮಾಣ ಮಾಡುವಂತೆ ಹೇಳುವುದಾಗಿ ತಿಳಿಸಿದರು.
ಸತ್ಯಾಗ್ರಹದ ಸ್ಥಳದಲ್ಲಿ ಗುರುವಾರದಿಂದ ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ನಡೆಸಿದ್ದ ನಾಲತವಾಡ ಘಟಕದ ಅಧ್ಯಕ್ಷ ಸೋಮಶೇಖರ ಚಿಕ್ಕೊಳ್ಳಿ ಅವರ ಮನವೊಲಿಸಿ ಅದನ್ನು ಕೆಳಗಿಳಿಸಿದರು.
ನಿಮ್ಮ ಹೋರಾಟ ಶಾಂತಿಯುತವಾಗಿ ನಡೆಸಿ, ಆದರೆ ದೇಹ ದಂಡಿಸಿ ಸತ್ಯಾಗ್ರಹ ಮಾಡುವುದು ನನ್ನ ಮನಸ್ಸಿಗೆ ನೋವು ತರುತ್ತದೆ ಎಂದು ಹೇಳಿದರು. ಶಾಸಕರೊಂದಿಗೆ ತಹಶೀಲ್ದಾರ ಸೋಮಲಿಂಗ ಗೆಣ್ಣೂರ ಉಪಸ್ಥಿತರಿದ್ದು, ತಾವೂ ಸಹ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವು ದಾಗಿ ಹೇಳಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಮಾರುತಿ ಹಿಪ್ಪರಗಿ, ಕಾರ್ಯದರ್ಶಿ ಪ್ರಕಾಶ ಸಂಗಮ, ಉಪಾಧ್ಯಕ್ಷ ರಾಜು ತುಂಬಗಿ, ಚೇತನ ಓಸ್ವಾಲ, ಭೀಮು ನಾಯಕ, ನೀಲಮ್ಮ ಬೋರಾವತ, ಲಕ್ಷ್ಮಿಬಾಯಿ ಪಾಟೀಲ, ವಾಸುದೇವ ಶಾಸ್ತ್ರಿ, ಬಾಬು ಬಿರಾದಾರ, ಸಿಕಂದರ್ ಜಾನ್ವೇಕರ, ಪರಶುರಾಮ ಮುರಾಳ, ರವಿ ಜಗಲಿ, ಅಶೋಕ ಭೋವಿ, ವೀರೇಶ ಗುರಿಕಾರ, ಭೀಮನಗೌಡ ಪಾಟೀಲ, ಮೆಹಬೂಬ ಜಾಗಿರದಾರ, ಕಾಮರಾಜ ಬಿರಾದಾರ, ಮಹಿಬೂಬ ಗೊಳಸಂಗಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.