ಬೆಂಗಳೂರು: ಕನಕಪುರ ತಾಲ್ಲೂಕಿನ ಮರಳವಾಡಿ ಹೋಬಳಿಯ ಬನವಾಸಿ ಗ್ರಾಮದಲ್ಲಿ ತಾವು ನಡೆಸುತ್ತಿರುವ ಕಲ್ಲು ಗಣಿಗಾರಿಕೆ ಕಾನೂನು ಬದ್ಧವಾಗಿದೆ ಎಂದು ಗಣಿಯ ಮಾಲೀಕ ಎಚ್.ಆರ್. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
`ಬನವಾಸಿ ಗ್ರಾಮದ ಸರ್ವೆ ಸಂಖ್ಯೆ 90ರಲ್ಲಿ ನಾನು ಗಣಿಗಾರಿಕೆಯನ್ನು ಕನಿಷ್ಠ ಪ್ರಮಾಣದಲ್ಲಿ ನಡೆಸುತ್ತಿದ್ದೇನೆ. ಸರ್ಕಾರ ನಿಗದಿ ಮಾಡಿದ ರಾಯಧನವನ್ನೂ ಪಾವತಿಸುತ್ತಿದ್ದೇನೆ. ಬಾಡಿಗೆ ಜನರನ್ನು, ಗೂಂಡಾಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ನನಗಿಲ್ಲ. ಆದರೆ ವಡೇರಹಳ್ಳಿ ಗ್ರಾಮದ ಕೆಲವು ಕಿಡಿಗೇಡಿಗಳು ಗೂಂಡಾಗಿರಿ ನಡೆಸಿ, ನನಗೆ ಲಕ್ಷಾಂತರ ರೂಪಾಯಿ ನಷ್ಟವುಂಟು ಮಾಡುತ್ತಿದ್ದಾರೆ. ಈ ಕುರಿತು ಕಾನೂನು ಹೋರಾಟ ನಡೆಸುತ್ತಿದ್ದೇನೆ~ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
`ಜಲ್ಲಿ ಕ್ರಷರ್ ಅನ್ನು ಸ್ವಂತ ಜಮೀನಿನಲ್ಲಿ ಹಾಕಲಾಗಿದೆ. ಕ್ರಷರ್ ನೀತಿ ಜಾರಿಯಾಗುವವರೆಗೂ ಅದೇ ಜಾಗದಲ್ಲಿ ಕೆಲಸ ಮುಂದುವರಿಸಲು ನಿರ್ದೇಶನ ಇದೆ. ಅದನ್ನು ಸುರಕ್ಷಿತ ವಲಯಕ್ಕೆ ಸ್ಥಳಾಂತರಿಸಲು ಸರ್ಕಾರ ಸೂಚಿಸಿದರೆ ಹಾಗೆ ಮಾಡಲು ಬದ್ಧ~ ಎಂದು ಅವರು ತಿಳಿಸಿದ್ದಾರೆ.
`ವಡೇರಹಳ್ಳಿ ಗ್ರಾಮದಿಂದ ನಾನು ಗಣಿಗಾರಿಕೆ ನಡೆಸುತ್ತಿರುವ ಪ್ರದೇಶಕ್ಕೆ ಎರಡು ಕಿ.ಮೀ. ಅಂತರವಿದೆ. ಅಲ್ಲಿ ಬಂಡೆಗಳನ್ನು ಸಿಡಿಸಲು ನಾನು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿಲ್ಲ. ಗಣಿಗಾರಿಕೆ ನಡೆಯುತ್ತಿರುವ ಬಂಡೆಯ ಸುತ್ತ ಈ ಗ್ರಾಮದ ಯಾರ ಜಮೀನೂ ಇಲ್ಲ~ ಎಂದು ಹೇಳಿದ್ದಾರೆ. `ಪ್ರಜಾವಾಣಿ~ಯಲ್ಲಿ ಗುರುವಾರ ಪ್ರಕಟವಾಗಿದ್ದ `ಗ್ರಾಮಕ್ಕೆ ಬೆಂಕಿ ಹಚ್ಚುವ ಬೆದರಿಕೆ!~ ವರದಿಗೆ ಶಿವಕುಮಾರ್ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.