ಚಾಮರಾಜನಗರ: `ಮುಖ್ಯಮಂತ್ರಿ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ~ ಎಂಬ ಮೂಢನಂಬಿಕೆ ಹೀಗೆ ಮುಂದುವರಿದರೆ ಜಿಲ್ಲೆಯ ಪ್ರಗತಿ ಕುಂಠಿತವಾಗುವುದರ ಜತೆಗೆ ಮೂಢನಂಬಿಕೆಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೋಮವಾರ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಅರ್.ಅಂಬೇಡ್ಕರ್ ಭವನದಲ್ಲಿ ನಡೆದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿ ಕಾರ್ಯ ಹಾಗೂ ಜಿಲ್ಲೆಗೆ ಅಂಟಿರುವ ಕಳಂಕವನ್ನು ಕೊನೆ ಮಾಡಲು ಪಾದಯಾತ್ರೆ ಹಾಗೂ ಸಮಾವೇಶ ನಡೆಸುತ್ತಿರುವುದಾಗಿ ತಿಳಿಸಿದರು.
ಶಾಸಕರಾದ ವಿ.ಶ್ರೀನಿವಾಸ್ ಪ್ರಸಾದ್, ಎಚ್.ಎಸ್.ಮಹದೇವಪ್ರಸಾದ್, ನರೇಂದ್ರ, ಸಿ.ಪುಟ್ಟರಂಗಶೆಟ್ಟಿ, ಬುದ್ಧಪ್ರಕಾಶ್ ಬಂತೇಜಿ, ಭಗೀರಥ ಮಹಾಸಂಸ್ಥಾನದ ಪುರುಷೋತ್ತಮಾನಂದ ಸ್ವಾಮೀಜಿ, ಮಾಜಿ ಶಾಸಕ ಎಸ್.ಬಾಲರಾಜು, ಬಿ.ಎಸ್.ಪಿ. ರಾಜ್ಯ ಸಂಚಾಲಕ ಎನ್.ಮಹೇಶ್, ಫಾದರ್ ಕ್ರಿಸ್ಟಿ ಸ್ಯಾಂ ಇತರರು ಭಾಗವಹಿಸಿದ್ದರು.