ನವದೆಹಲಿ (ಪಿಟಿಐ): ‘ಬಿಸಿಸಿಐ ಹೇರಿರುವ ಆಜೀವ ನಿಷೇಧ ಶಿಕ್ಷೆಯಿಂದ ಮುಕ್ತನಾಗುತ್ತೇನೆ. ಕಳಂಕ ರಹಿತನಾಗಿ ಬರುತ್ತೇನೆ. ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ಕೇರಳದ ವೇಗಿ ಎಸ್. ಶ್ರೀಶಾಂತ್ ಹೇಳಿದ್ದಾರೆ.
‘ಆಜೀವ ನಿಷೇಧ ಶಿಕ್ಷೆ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ಭಾರತಕ್ಕಾಗಿ ಆಡಬೇಕೆನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ನಾನೇಕೆ ಕಳ್ಳಾಟದಲ್ಲಿ ತೊಡಗಲಿ. ಸಮಿತಿ ಮುಂದೆ ಹೆಚ್ಚು ವಾದ ಮಾಡಲು ಹೋಗಲಿಲ್ಲ. ಶಿಸ್ತು ಸಮಿತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದೆ’ ಎಂದು ವೇಗಿ ಶ್ರೀಶಾಂತ್ ಹೇಳಿದರು.
30 ವರ್ಷದ ಶ್ರೀಶಾಂತ್ 27 ಟೆಸ್ಟ್ ಮತ್ತು 53 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. 2005ರಲ್ಲಿ ನಾಗಪುರದಲ್ಲಿ ನಡೆದ ಶ್ರೀಲಂಕಾ ಎದುರಿನ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಕಳಪೆ ಪ್ರದರ್ಶನದ ಕಾರಣ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಶ್ರೀಶಾಂತ್ 2011ರಲ್ಲಿ ಕೊನೆಯ ಏಕದಿನ ಮತ್ತು ಟೆಸ್ಟ್್ ಪಂದ್ಯವನ್ನಾಡಿದ್ದರು.
‘ಶಿಸ್ತು ಸಮಿತಿ ನನ್ನನ್ನು ಪ್ರಶ್ನಿಸಿತು. ಸಮಿತಿಯ ಸದಸ್ಯರು ಚೆನ್ನಾಗಿ ಬೆಂಬಲ ನೀಡಿದರು. ನನಗೆ ಗೊತ್ತಿರುವ ಎಲ್ಲಾ ವಿಷಯಗಳನ್ನು ಅವರ ಮುಂದೆ ಹೇಳಿದೆ. ಈಗ ನಡೆದಿರುವ ಯಾವುದೇ ಕಹಿ ಘಟನೆಗಳು ನನ್ನ ಕ್ರಿಕೆಟ್ ಬದುಕಿನ ಮೇಲೆ ಪರಿಣಾಮ ಬೀರುವುದಿಲ್ಲ. ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ಶ್ರೀಶಾಂತ್ ನುಡಿದರು. ಶ್ರೀಶಾಂತ್ ಶುಕ್ರವಾರ ಸಂಜೆ ಕೇರಳಕ್ಕೆ ಹಿಂತಿರುಗಿದರು.