ಧಾರವಾಡ: ಇಲ್ಲಿಯ ಸಪ್ತಾಪುರದಲ್ಲಿ ಬಿಸಿಎಂ ಇಲಾಖೆ ನಡೆಸುತ್ತಿರುವ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಊಟ ಬಿಟ್ಟು ಪ್ರತಿಭಟನೆ ನಡೆಸಿದರು.
‘ಕಳೆದ ಹಲವು ತಿಂಗಳುಗಳಿಂದ ಕಲಬೆರಕೆ ಆಹಾರ ನೀಡಲಾಗುತ್ತಿದೆ. ಬಿಸಿ ಊಟದೊಂದಿಗೆ ತಂಗಳನ್ನವನ್ನು ಸೇರಿಸಿ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಸ್ಥಿತಿ ಸುಧಾರಿಸಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
‘ಹಲವು ಬಾರಿ ಹಳಸಿದ ಅನ್ನವನ್ನು ನೀಡಲಾಗುತ್ತಿದ್ದು, ಕೊಳೆತ ತರಕಾರಿಯನ್ನೂ ಅಡುಗೆಯಲ್ಲಿ ಬಳಸಲಾಗುತ್ತಿದೆ. ಆ ಕುರಿತು ಪ್ರಶ್ನಿಸಿದವರ ವಿರುದ್ಧ ಅಡುಗೆಯವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಸೋಮವಾರ ರಾತ್ರಿ ಕಳಪೆ ಆಹಾರ ನೀಡಿದ್ದರಿಂದ ಕೆಲ ವಿದ್ಯಾರ್ಥಿಗಳು ಊಟ ಮಾಡದೇ ಮಲಗಿದರು.
ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಸಿದ್ಧಲಿಂಗಯ್ಯ ಹಿರೇಮಠ, ‘ಈ ಬಗ್ಗೆ ನಾನು ಅಡುಗೆಯವರಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಆದರೂ ಒಮ್ಮೊಮ್ಮೆ ಹೀಗಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳೂ ಗಮನಕ್ಕೆ ತಂದಿದ್ದಾರೆ. ಆದರೂ, ಮಧ್ಯಾಹ್ನ ಮಾಡಿದ ಅಡುಗೆಯನ್ನು ರಾತ್ರಿ ಊಟ ಮಾಡಲು ಕಷ್ಟವೇನು? ನಾನು ನಮ್ಮ ಮನೆಯಲ್ಲಿ ಮಧ್ಯಾಹ್ನ ಮಾಡಿದ ಅನ್ನವನ್ನೇ ಊಟ ಮಾಡಿದೆ’ ಎಂದರು. ವಿದ್ಯಾರ್ಥಿಗಳು ನಂತರ ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.