ಕನಕಪುರ: ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆಗೆ ಅಧಿಕಾರಿಗಳು ಭೇಟಿ ನೀಡದಿರುವುದರಿಂದ ಕಾಮಗಾರಿಗಳ ಗುಣಮಟ್ಟ ಹದಗೆಟ್ಟಿದೆ. ಗುತ್ತಿಗೆದಾರರು ಅಕ್ರಮವಾಗಿ ಬಿಲ್ಗಳನ್ನು ನೀಡಿ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿರುವ ಕಾರಣ ವಿರೋಧ ಪಕ್ಷದ ನಾಯಕ ಬಿ.ನಾಗರಾಜು ಅವರು ಬುಧವಾರ ನಡೆದ ಪುರಸಭೆಯ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನ್ಯಾಯಾಂಗ ಇಲಾಖೆಯು ಪಟ್ಟಣದ ಪೇಟೆಕೆರೆಯಲ್ಲಿ ವಸತಿಗೃಹ ನಿರ್ಮಿಸುತ್ತಿರುವ ಸಂಬಂಧ ತುರ್ತು ಸಭೆಯನ್ನು ಕರೆಯಲಾಗಿತ್ತು. ಆದರೆ ವಸತಿಗೃಹ ನಿರ್ಮಾಣಕ್ಕಾಗಿ ನ್ಯಾಯಾಂಗ ಇಲಾಖೆ ಯಾವುದೇ ಲಿಖಿತ ಮನವಿ ನೀಡಿಲ್ಲದ ಕಾರಣ ವಿಷಯವನ್ನು ಕೈಬಿಡಲಾಯಿತು.
ಉಳಿದಂತೆ 2011-12ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಡಿ ಬಂದಿರುವ ಒಂದು ಕೋಟಿ ಎರಡು ಲಕ್ಷದ ನಲವತ್ತು ಸಾವಿರ ರೂ.ಗಳನ್ನು ವಾರ್ಡುಗಳಲ್ಲಿನ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸುವ ಬಗ್ಗ ಸಭೆಯಲ್ಲಿ ಚರ್ಚಿಸಲಾಯಿತು.
ಪ.ಜಾತಿ ಹಾಗೂ ಪ. ಪಂಗಡ ಕಾಲೊನಿಗಳನ್ನು ಅಭಿವೃದ್ಧಿಪಡಿಸಲು ಮಂಜೂರಾಗಿರುವ 20 ಲಕ್ಷ ರೂಪಾಯಿಗಳನ್ನು ವ್ಯಯಿಸುವ ಬಗ್ಗೆ ಸದಸ್ಯರು ಚರ್ಚಿಸಿದರು.
ಮುಗಿಯದ ಬೆಸ್ಕಾಂ ಸಮಸ್ಯೆ:ಪಟ್ಟಣದಲ್ಲಿ ಬೆಸ್ಕಾಂನವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಯಾವುದೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಹಣ ಕಟ್ಟಿಸಿಕೊಂಡರೂ ಸ್ಥಳಾಂತರಿಸದೆ ತೊಂದರೆ ನೀಡುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಸಭೆಯಲ್ಲಿ ಉಪಾಧ್ಯಕ್ಷೆ ನಿರ್ಮಲ ಗುಂಡಣ್ಣ, ಮುಖ್ಯಾಧಿಕಾರಿ ಮಾಯಣ್ಣಗೌಡ, ಹಿರಿಯ ಸದಸ್ಯರಾದ ಜಯರಾಮು, ಪುಟ್ಟರಾಜು, ಮೋಹಿನ್ ಮತ್ತಿತರರು ಹಾಜರಿದ್ದರು.