ರಾಜರಾಜೇಶ್ವರಿ ನಗರ: `ಸಾರ್ವಜನಿಕರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿಗಾ ಇರಿಸಬೇಕು. ಕಳಪೆ ಕಾಮಗಾರಿ ಎಂದು ಕಂಡು ಬಂದರೆ ಕೂಡಲೇ ದೂರು ನೀಡಬೇಕು~ ಎಂದು ಗೃಹ ಸಚಿವ ಆರ್.ಅಶೋಕ ಹೇಳಿದರು.
ಚಿಕ್ಕಲ್ಲಸಂದ್ರ ವಾರ್ಡ್ ವ್ಯಾಪ್ತಿಯ ಹನುಮಗಿರಿ ನಗರದಲ್ಲಿ 1.42 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಚರಂಡಿಗಳ ಸ್ವಚ್ಛತಾ ಕಾರ್ಯ ಮತ್ತು ಕಲ್ಲುಚಪ್ಪಡಿ ಹೊದಿಕೆ ಹಾಕುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಪಾಲಿಕೆ ಸದಸ್ಯ ಬಿ.ಎಸ್.ವೆಂಕಟಸ್ವಾಮಿ ನಾಯ್ಡು ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಕಾರ್ಯಕ್ರಮಗಳು ವಿಫಲವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯರಾದ ಎಚ್.ನಾರಾಯಣ್, ಶ್ರೀನಿವಾಸ್, ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಪಿ.ಮಹದೇವಯ್ಯ, ಸಹಾಯಕ ಎಂಜಿನಿಯರ್ ಲಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.