ನವದೆಹಲಿ (ಪಿಟಿಐ): ‘ಬಲಿಷ್ಠ ಭಾರತ ತಂಡದ ಚಾಂಪಿಯನ್ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರಿಗೆ ನಾಲ್ಕು ಬಾರಿ ಜೀವದಾನ ನೀಡಿದ್ದು ಹಾಗೂ ಕಳಪೆ ಫೀಲ್ಡಿಂಗ್ ಪಾಕ್ ತಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಲು ಕಾರಣ’ ಎಂದು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ದೂರಿದ್ದಾರೆ.
ಸಚಿನ್ ಅವರಿಗೆ ನಾಲ್ಕು ಬಾರಿ ಜೀವದಾನ ನೀಡಿದ್ದರಿಂದಲೇ ಅವರು ಭರ್ಜರಿ 85 ರನ್ ಕಲೆ ಹಾಕಿದರು. ಇದರಿಂದ ಶಾಹೀದ್ ಅಫ್ರಿದಿ ಪಡೆ ಬಾರಿ ಬೆಲೆ ತೆತ್ತಬೇಕಾಯಿತು. ಉಭಯ ತಂಡಗಳ ಆಟಗಾರರ ಮೇಲೂ ಪಂದ್ಯ ಗೆಲ್ಲಬೇಕೆನ್ನುವ ಒತ್ತಡವಿತ್ತು. ಆರಂಭದಲ್ಲಿಯೇ ಸಚಿನ್ಗೆ ದೊರೆತ ಅವಕಾಶಗಳು ತಂಡದ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿತು. ಭಾರತಕ್ಕೆ ವರವಾಗಿ ಪರಿಣಮಿಸಿತುಎಂದು ಇಮ್ರಾನ್ ಅಭಿಪ್ರಾಯಪಟ್ಟಿದ್ದಾರೆ.ಉಮರ್ ಗುಲ್ ಸಾಕಷ್ಟು ರನ್ ನೀಡಿ ತಂಡವನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು ಎಂದು ಅವರು ಹೇಳಿದ್ದಾರೆ.