ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವಿಗೆ ಯತ್ನ: ಗ್ರಾಮಸ್ಥರಿಂದ ಆರೋಪಿಗೆ ಥಳಿತ

Last Updated 26 ಡಿಸೆಂಬರ್ 2012, 5:24 IST
ಅಕ್ಷರ ಗಾತ್ರ

ಯಾದಗಿರಿ: ಕಳವು ಮಾಡಲು ಯತ್ನಿಸಿ ಗ್ರಾಮಸ್ಥರ ಕೈಗೆ ಸಿಕ್ಕು ಬಿದ್ದ ಕಳ್ಳನೊಬ್ಬನನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲ್ಲೂಕಿನ ಅರಕೇರಾ ಕೆ. ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಸಾಯಿಬಣ್ಣ ಎಂಬಾತನನ್ನು ಗ್ರಾಮಸ್ಥರು ಥಳಿಸಿದ್ದಾಗಿ ತಿಳಿದುಬಂದಿದೆ. ಬೆಳಗಿನ ಜಾವ ಗ್ರಾಮದ ಹೋಟೆಲ್‌ಗೆ ಹೋಗಿದ್ದ ಸಾಯಿಬಣ್ಣ, ಅಲ್ಲಿದ್ದ ಮಹಿಳೆಗೆ ನಕಲಿ ಪಿಸ್ತೂಲ್ ಹಾಗೂ ಚಾಕು ತೋರಿಸಿ, ರೂ 50 ಸಾವಿರ ನಗದು ಹಾಗೂ 50 ಗ್ರಾಮ್ ಚಿನ್ನ ದೋಚಿ ಪರಾರಿಯಾಗಿದ್ದ. ಆರೋಪಿಯ ಬೆನ್ನು ಹತ್ತಿದ್ದ ಗ್ರಾಮದ ಯುವಕರು ಸುಮಾರು 18 ಕಿ.ಮೀ. ದೂರದಲ್ಲಿ ಆತನನ್ನು ಹಿಡಿದು, ಗ್ರಾಮಕ್ಕೆ ಕರೆ ತಂದರು. ನಂತರ ಗ್ರಾಮದ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾಗಿ ತಿಳಿದುಬಂದಿದೆ.

ಆದರೆ ಗ್ರಾಮಸ್ಥರು ಹೇಳುವಂತೆ ತಾನು ಅರಕೇರಾ ಕೆ. ಗ್ರಾಮದಲ್ಲಿ ಕಳವು ಮಾಡಿಲ್ಲ ಎಂದ ಸಾಯಿಬಣ್ಣ, ತಾನು ಸುಮಾರು 90 ಸಾವಿರ ಸಾಲ ಮಾಡಿದ್ದರಿಂದ ತಾಲ್ಲೂಕಿನ ಮಾದ್ವಾರ, ಕಾಳೆಬೆಳಗುಂದಿ, ಮೈಲಾಪುರ ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದೇನೆ. ಬೆಳಿಗ್ಗೆ ಮೈಲಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದ್ದುಕೊಂಡು, ಅರಕೇರಾ ಗ್ರಾಮಕ್ಕೆ ಬಂದಿದ್ದ ಗ್ರಾಮಸ್ಥರಿಗೆ ವಿವರಣೆ ನೀಡಲು ಮುಂದಾದುದಾಗಿ ಮಾಹಿತಿ ಲಭಿಸಿದೆ.

ಇದನ್ನು ಕೇಳದ ಗ್ರಾಮಸ್ಥರು, ಆರೋಪಿಯನ್ನು ಥಳಿಸಿದರು. ಅಡಿವೆಮ್ಮ ಎಂಬವರನ್ನು ಬೆದರಿಸಿ ನಗದು ಹಾಗೂ ಚಿನ್ನ ದೋಚಿ ಈತ ಪರಾರಿಯಾಗಿದ್ದ ಎಂದು ಗ್ರಾಮಸ್ಥರು ದೂರಿದರು.

ಸುದ್ದಿ ತಿಳಿದು ಅರಕೇರಾ ಕೆ. ಗ್ರಾಮಕ್ಕೆ ಆಗಮಿಸಿದ್ದ ನಗರದ ಇಬ್ಬರು ಯುವಕರನ್ನೂ ಗ್ರಾಮಸ್ಥರು ಥಳಿಸಿದ್ದಾರೆ. ವಿಷ್ಣು ದಾಸನಕೇರಿ ಹಾಗೂ ಬಸವರಾಜ ಗೌಡ ಎಂಬುವವರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದಾಗ ಗುಂಪುಗೂಡಿದ ಗ್ರಾಮಸ್ಥರು, ಇವರೂ ಕಳ್ಳನಿಗೆ ಸಹಾಯ ಮಾಡಲು ಬಂದವರಿರಬಹುದು ಎಂದು ಭಾವಿಸಿ ಇಬ್ಬರನ್ನೂ ಥಳಿಸಿದ್ದಾರೆ.

ವಿಷಯ ತಿಳಿದ ಗುರುಮಠಕಲ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯಿಂದ ನಕಲಿ ಪಿಸ್ತೂಲ್, ಬೈಕ್, ಚಾಕು, ಖಾರದ ಪುಡಿ ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT