ಮಡಿಕೇರಿ : ಕಳವು ಮಾಡಿದವನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ನಗರದ ಅಧಿಕ ಸಿವಿಲ್ ನಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿ ಬಿ. ಸಿದ್ದರಾಜು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.
ಉಲುಗುಲಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಎಂ.ಸಿ. ಉತ್ತಪ್ಪ ಅವರ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಯ ಹೆಂಚುಗಳನ್ನು ತೆಗೆದು ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿ ನಿವಾಸಿ ಷಣ್ಮುಖ ಉರುಫ್ ರಾಜು ಎಂಬಾತ 2004ರ ಜುಲೈ 2 ರಂದು 76 ಗ್ರಾಂ ತೂಕದ ಚಿನ್ನದ ವಿವಿಧ ಆಭರಣಗಳನ್ನು ಕಳವು ಮಾಡಿದ್ದ ಎಂದು ಆರೋಪಿಸಲಾಗಿತ್ತು.
ಪ್ರಕಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆ ಕಲಂ 454 ರಡಿಯಲ್ಲಿನ ಅಪರಾಧಕ್ಕಾಗಿ 1 ವರ್ಷ ಸಾದಾಸಜೆ ಮತ್ತು ರೂ.200 ದಂಡ ವಿಧಿಸಿದ್ದಾರೆ.
ಕಲಂ 380ರಡಿಯಲ್ಲಿನ ಅಪರಾಧಕ್ಕಾಗಿ 1 ವರ್ಷಗಳ ಸಾದಾ ಸಜೆ ಹಾಗೂ ರೂ.200 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಈ ಎರಡು ಪ್ರಕರಣಗಳಲ್ಲಿ ಪತ್ಯೇಕವಾಗಿ ಪುನಃ 15 ದಿನಗಳ ಸಾದಾ ಸಜೆಯನ್ನು ಅನುಭವಿಸುವಂತೆ ಅವರು ಸೂಚಿಸಿದ್ದಾರೆ.
ಪ್ರಕರಣದ ಅಂತಿಮವಾದವನ್ನು ಸರ್ಕಾರದ ಪರವಾಗಿ ಸಹಾಯಕ ಸರ್ಕಾರು ಅಭಿಯೋಜಕ ರಾಜ ಅವರು ನಡೆಸಿಕೊಟ್ಟರು.