ಕಳಸ: ಇಲ್ಲಿಗೆ ಸಮೀಪದ ಕಚಗಾನೆ ಬಳಿ ಗುರುವಾರ ಬೆಳಿಗ್ಗೆ ಬಸ್ ಮತ್ತು ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಕೂಲಿ ಕಾರ್ಮಿಕ ಮೃತಪಟ್ಟು, 6 ಜನರು ಗಾಯಗೊಂಡಿದ್ದಾರೆ.
ಮರಸಣಿಗೆ ಸಮೀಪದ ಬಾಳೆಕಾನಿ ನಿಂದ ಕಳಸಕ್ಕೆ ಮೂವರು ಕಟ್ಟಡ ಕಾರ್ಮಿಕರು ಗುರುವಾರ ಬೆಳಿಗ್ಗೆ 9 ಗಂಟೆ ವೇಳೆಗೆ ಆಟೋದಲ್ಲಿ ಬರುತ್ತಿದ್ದರು. ಕಚಗಾನೆ ಬಳಿ ಹೊರನಾಡಿನಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಆಟೊಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ಸ್ಥಳದಲ್ಲೇ ಮರಸಣಿಗೆ ಸಮೀಪದ 28 ವರ್ಷದ ಕಾರ್ಮಿಕ ಬಾಲು(ಮಹೇಶ್) ಮೃತಪಟ್ಟಿದ್ದಾರೆ. ಆಟೊದಲ್ಲಿ ಇದ್ದ ಆತನ ಅಣ್ಣ ರಮೇಶ ಮತ್ತು ಗಂಗನಕೊಡಿಗೆಯ ಹರೀಶ್ ಕೂಡ ಗಾಯಗೊಂಡಿದ್ದಾರೆ.
ರಸ್ತೆ ಪಕ್ಕದ ಕಲ್ಲಾಟ ಬಸ್ ನಿಲುಗಡೆ ತಾಣದ ಬಳಿ ನಿಂತಿದ್ದ ಹಿನಾರಿಯ ಚಂದ್ರಶೇಖರ ಮತ್ತು ಪ್ರಭಾಕರ ಅವರಿಗೂ ಅಪಘಾತದ ಸಂದರ್ಭದಲ್ಲಿ ತೀವ್ರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಲ್ಪಸ್ವಲ್ಪ ಗಾಯಗೊಂಡಿದ್ದ ಆಟೊ ಚಾಲಕ ಪ್ರವೀಣ, ಕಾರ್ಮಿಕರಾದ ರಮೇಶ, ಹರೀಶ ಮತ್ತ ಹಂದಿಹಡ್ಲಿನ ಪ್ರವೀಣ ಅವರಿಗೆ ಕಳಸದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ.
ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.