ಬೆಂಗಳೂರು: ಬೈಯಪ್ಪನಹಳ್ಳಿ ಸಮೀಪದ ಎನ್ಜಿಇಎಫ್ ಕಾರ್ಖಾನೆಗೆ ನುಗ್ಗಿದ್ದ ಕಳ್ಳರನ್ನು ಹಿಡಿಯುವ ಯತ್ನದಲ್ಲಿ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ರಾತ್ರಿ 12 ಗಂಟೆ ಹೊತ್ತಿಗೆ ಕಾರ್ಖಾನೆ ಆವರಣಕ್ಕೆ ಸುಮಾರು 30 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರ ಸಹಿತ ನುಗ್ಗಿದ್ದಾರೆ ಎಂದು ಕಾರ್ಖಾನೆಯ ಸೆಕ್ಯುರಿಟಿ ಗಾರ್ಡ್ಗಳು ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಲಾಯಿತು. ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆದರೆ, ಆರೋಪಿಗಳು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಿಡಿಗೇಡಿಗಳು ಕಾರ್ಖಾನೆಯೊಳಗಿದ್ದ ಟ್ರಾನ್ಸ್ಫಾರ್ಮರ್ಗಳಿಂದ ತಾಮ್ರದ ತಂತಿಯನ್ನು ಕಳವು ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.