ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ ಬರೆಯಲು ಎಂದೂ ಪ್ರಯತ್ನಿಸಿಲ್ಲ: ಸಚಿನ್

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ತಂದೆ ಕವಿಯಾಗಿದ್ದರೂ ಮಗ ಕ್ರಿಕೆಟಿಗ. ಬ್ಯಾಟಿಂಗ್‌ನಿಂದಲೇ ಸುಂದರ ಆಟದ ಚೆಂದದ ನೂರಾರು ಕವಿತೆಗಳನ್ನು ಬರೆದ ಸಚಿನ್ ತೆಂಡೂಲ್ಕರ್ ತಮ್ಮ ತಂದೆಯಂತೆಯೇ ಕಾಗದದ ಮೇಲೆ ಕವಿತೆಯನ್ನು ಬರೆಯುವ ಪ್ರಯತ್ನವನ್ನೆಂದೂ ಮಾಡಿಲ್ಲ.

ಇದನ್ನು ಸ್ವತಃ ತೆಂಡೂಲ್ಕರ್ ಅವರೇ ಒಪ್ಪಿಕೊಂಡಿದ್ದಾರೆ. ‘ನಾನೆಂದೂ ಬರೆಯುವ ಸಾಹಸವನ್ನು ಮಾಡಿಲ್ಲ. ನನ್ನ ಅಭಿಪ್ರಾಯದಲ್ಲಿ ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಇರುತ್ತದೆ. ತಮ್ಮಲ್ಲಿರುವ ವಿಶಿಷ್ಟವಾದ ಶಕ್ತಿಯನ್ನು ಪ್ರತಿಯೊಬ್ಬರೂ ಇಷ್ಟಪಟ್ಟು, ಅದಕ್ಕೆ ತಕ್ಕಂತೆ ಬೆಳೆಯಬೇಕು. ನಾನು ಕವಿಯಾಗಬೇಕು ಎಂದರೆ ಅದು ಸಾಧ್ಯವಿಲ್ಲ. ಅಂಥದೊಂದು ಪ್ರಯತ್ನ ಮಾಡಿ ಜನಮೆಚ್ಚುವ ಕಾವ್ಯ ಬರೆಯುತ್ತೇನೆಂದು ಹೇಳುವುದಕ್ಕೂ ಆಗದು. ಆದರೆ ಕವಿಗಳು ಬರೆದಿದ್ದನ್ನು ಓದಿ ಇಲ್ಲವೆ ಆಲಿಸಿ ಮೆಚ್ಚುಗೆ ಸೂಚಿಸುತ್ತೇನೆ. ಅಷ್ಟು ಮಾತ್ರ ಮಾಡಬಲ್ಲೆ’ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಣ್ಣ ನಿತಿನ್ ತೆಂಡೂಲ್ಕರ್ ಕ್ರಿಕೆಟ್ ಆಟವನ್ನು ಬಿಟ್ಟು ಕವಿತೆ ಬರೆಯತೊಡಗಿದ್ದು, ತಮ್ಮ ಸಚಿನ್ ಕ್ರಿಕೆಟಿಗನಾಗಿ ಬೆಳೆಯಲೆಂದು. ಇಬ್ಬರೂ ಒಟ್ಟಿಗೇ ಒಂದೇ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ಆಗುತ್ತಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು ‘ಅಣ್ಣ ನನಗಾಗಿ ಕ್ರಿಕೆಟ್ ಬಿಟ್ಟ; ಹಾಗೆಯೇ ನಾನು ಕೂಡ ಅವನು ಆಯ್ದುಕೊಂಡ ಕ್ಷೇತ್ರದಲ್ಲಿ ಕೈಹಾಕಲಿಲ್ಲ’ ಎಂದು ಹೇಳಿ ಮಂದಹಾಸ ಬೀರಿದರು.

‘ಸಚಿನ್ ತಂದೆ ರಮೇಶ್ ತೆಂಡೂಲ್ಕರ್ ಬರೆದಿರುವ ಕವಿತೆಗಳ ಧ್ವನಿ ಸುರುಳಿ ಹಾಗೂ ಸಿಡಿಗಳ ಬಿಡುಗಡೆ ಇದೇ ವಾರ ನಡೆಯಲಿದೆ. ಅದೇ ಸಂದರ್ಭದಲ್ಲಿ ಸಚಿನ್ ಸಹೋದರ ನಿತಿನ್ ಅವರ ಕವನ ಸಂಕಲನವೂ ಬಿಡುಗಡೆಯಾಗಲಿದೆ. ಈ ವಿಷಯವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT