ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಲೋಕದ ಚೇಷ್ಟೆಗೆ ರವಿ ಬೀಜವಾಗಿತ್ತು

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಾವು ಏನನ್ನು ಬೇಕಾದರೂ ತಿನುತ್ತೇವೆ ಸ್ವಾಮಿ- ಏನನ್ನು
ಬೇಕಾದರೂ, ಎನ್ನುವ ವೃತ್ತಿಪರ ಪಾರಣೆ ಮಂದಿ ಮುಂದೆ
ನಾನು ಏನೂ ತಿನ್ನುವುದಿಲ್ಲ ಎಂದು ಮೊಂಡು ಹಿಡಿದು ಮೈ
ದಾನದಲ್ಲಿ ಮೈ ಮುರುಟಿ ಕೂತ ನಿತ್ಯೋಪವಾಸೀ ವ್ರತ
 
ಕ್ಕೆ ಜಯವಾಗಲಿ. ಭಯವಾಗಲಿ ಲಜ್ಜೆಯಾಗಲಿ ಇಲ್ಲದ
ಮೂರೂಬಿಟ್ಟ ಮಂದಿ ಬಂಡಿ ಬಂಡಿ ಅನ್ನವನ್ನ ಬಂಡಿ ಮತ್ತು
ಬಂಡಿಕಾರನ ಸಮೇತ ಗುಳುಂ ಮಾಡುತ್ತಿರುವ ಈ ಹೊತ್ತು
ಖಾಲಿ ಬಟ್ಟಲವನ್ನ ಕಲಸಮಾಡಿ ಒಳಜಲಕ್ಕಾಶಿಸಿ ಪರ್ಜನ್ಯಕ್ಕೆ
 
ಕೂತಿರುವಂಥ ಅಪ್ಪಟ ಕಕ್ಕುಲಾತಿಗೆ ಜಯವಾಗಲಿ. ಕಂಡದ್ದೇ ತಡ
ಮೂಡು ಬಾನಲ್ಲಿ ಧಗಧಗ ಪಂಜು, ನಾಡುದ್ದಕ್ಕೂ ಎದ್ದುಬಿದ್ದಾ
ಡಹತ್ತಿವೆ ನಿಷ್ಕಂಪ ಕೊಳೆಕಟ್ಟೆಗಳಲ್ಲಿ ತಳಮಳಿಸುವಲೆ.
ಈ ಅನಿರೀಕ್ಷಿತವಾದ ಮನಸ್ಸಿನಾಳದಪೇಕ್ಷಾ ಸಿಂಫನಿಗೆ
 
ಇಗೋ ತಗೋ ನನ್ನದೂ ಒಂದು ಅಲೆ. ಬಣ್ಣಗೆಟ್ಟ ಗಾಳಿಗೆ ತ್ರಿವರ್ಣದ
ರಂಗು ಮೆತ್ತಿದ ಹೊತ್ತು, ಅಂತಸ್ಥ ಮೌನಕ್ಕೆ ಮುತ್ತಿನಾಕೃತಿ
ಮೂಡ ಹತ್ತಿದ ಹೊತ್ತು, ಹೊಟ್ಟೆಬಾಕ ಕಬಂಧರನ್ನನಾಮತ್ತು ಎತ್ತಿ
ನಿಜದ ನೆಲಕ್ಕೆತ್ತಿ ಕುಕ್ಕುವ ಹೊತ್ತು, ಹಾರೈಸುತ್ತೇನೆ, ಗೇರೈಸಿದ
 
ಮುಗಿಲಿಗೆ ದಕ್ಕಲಪ್ಪಾ ದಕ್ಕಲಿ ಎಂದು ಬರ್ದಂಡು ಮಳೆ. ಬತ್ತಿದ ನದಿನದಕ್ಕೆ
ಸಿಕ್ಕಲಿ ಕಡಲಗುರಿಯೇಕಮುಖೀಚಲನೆಯಾವೇಶ. ತದ್ವಿರುದ್ಧ ಸೆಳೆತಗಳಿದ್ದೂ
ಗಟ್ಟಿಗೊಳಿಸಲಿ ಜಾಳಾಗದಂತೆ ಬಟ್ಟೆ. ಎಲ್ಲ ಅಬ್ಬರದುದ್ಘೋಷಗಳ ನಡುವೆ
ಮಿಡಿಯುತ್ತಿರಲಿ ಮಾತ್ರ ನಿತಾಂತಧ್ಯಾನದೇಕಶ್ರುತಿ-ಮಣಿದೀಪ ಪೋಣಿಸುವ ಹತ್ತಿಬತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT