ಧಾರವಾಡ: `ಹಿರಿಯ ಚಿತ್ರಕಲಾವಿದರಾದ ವರನಟ ರಾಜ್ಕುಮಾರ್, ವಿಷ್ಣುವರ್ಧನ್, ಭಾರತಿ ಅವರಿಗೆ ದಕ್ಷಿಣ ಕರ್ನಾಟಕದ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿದ್ದರೆ ಉತ್ತರ ಕರ್ನಾಟಕ ವ್ಯಾಪ್ತಿಗೆ ಸೇರಿದ ಕರ್ನಾಟಕ ವಿಶ್ವವಿದ್ಯಾಲಯ ನನಗೆ ಡಾಕ್ಟರೇಟ್ ನೀಡಿದ್ದು ಸಂತಸ ತಂದಿದೆ' ಎಂದು ಹಿರಿಯ ಚಿತ್ರನಟ ಅಂಬರೀಷ್ ಸಂತಸ ಹಂಚಿಕೊಂಡರು.
ಕರ್ನಾಟಕ ವಿ.ವಿ. ಆವರಣದಲ್ಲಿ ಶುಕ್ರವಾರ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನನ್ನ ಈ ಡಾಕ್ಟರೇಟ್ ನಾಡಿನ ಸಮಸ್ತ ಆರು ಕೋಟಿ ಕನ್ನಡಿಗರಿಗೆ ಸಲ್ಲಬೇಕು. ಕರ್ನಾಟಕ ವಿ.ವಿ. ನಾನು ಚಿತ್ರರಂಗದಲ್ಲಿ ಸಲ್ಲಿಸಿದ ಅಲ್ಪ ಸೇವೆಗೆ ಡಾಕ್ಟರೇಟ್ ನೀಡಿದೆ. ನಮ್ಮ ಕೆಲಸಗಳನ್ನು ಮಾಡ್ತಾನೆ ಹೋಗಬೇಕು' ಎಂದರು.
ಕಲಿತ ವಿ.ವಿ.ಯಿಂದ ಡಾಕ್ಟರೇಟ್: `ನಾನು ಕಲಿತ ಕರ್ನಾಟಕ ವಿ.ವಿ.ಯೇ ನನಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದರಿಂದ ಸಂತಸ ಇಮ್ಮಡಿಯಾಗಿದೆ. ಈಗಾಗಲೇ ನನಗೆ ಗುಲ್ಬರ್ಗ ವಿ.ವಿ. ಗೌರವ ಡಾಕ್ಟರೇಟ್ ನೀಡಿತ್ತು. ಅದಕ್ಕಿಂತ ಹೆಚ್ಚಾಗಿ ಈಗ ಕರ್ನಾಟಕ ವಿ.ವಿ. ಗೌರವ ಡಾಕ್ಟರೇಟ್ ನೀಡಿದ್ದು ಖುಷಿಯಾಗಿದೆ' ಎಂದು ತಮ್ಮ ವಿದ್ಯಾರ್ಥಿ ದಿನಗಳನ್ನು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಂತಸ ಹಂಚಿಕೊಂಡರು.
ಹಿರಿಯ ಗ್ರಂಥಾಲಯ ತಜ್ಞ, 90 ವರ್ಷ ಹಿರಿಯರಾದ ಪ್ರೊ.ಕೆ.ಎಸ್.ದೇಶಪಾಂಡೆ ಮಾತನಾಡಿ, `ಈ ಡಾಕ್ಟರೇಟ್ ನನಗೆ ಸಂದಿದ್ದು ಎನ್ನುವುದಕ್ಕಿಂತ ನಾಡಿನೆಲ್ಲೆಡೆ ಗ್ರಂಥಾಲಯಗಳನ್ನು ಸ್ಥಾಪಿಸುವಲ್ಲಿ ಶ್ರಮಿಸಿರುವವರೆಗೆ ಸಲ್ಲಬೇಕು. ಗ್ರಂಥಾಲಯಗಳು ವಿ.ವಿ.ಯ ಆತ್ಮವಿದ್ದಂತೆ. ಅವು ನಿಜವಾದ ಜ್ಞಾನದೇಗುಲಗಳು. ಗ್ರಂಥಗಳ ಸಂಗ್ರಹ ಮತ್ತು ವ್ಯಾಪಕ ಬಳಕೆ ಆಗಬೇಕು' ಎಂದರು.