ಹಳಿಯಾಳ: ನಶಿಸುತ್ತಿರುವ ಕುಸ್ತಿ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿವರ್ಷ ಹಳಿಯಾಳದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ. ಸರ್ಕಾರ ಕ್ರಿಕೆಟ್, ಹಾಕಿ ಇನ್ನಿತರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆದರೆ ಇಂದು ಕುಸ್ತಿ ಪಟುಗಳು ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ವಿಷಾದಿಸಿದರು.
ಇಲ್ಲಿನ ಜಿಲ್ಲಾ ಕುಸ್ತಿ ಆಖಾಡಾದಲ್ಲಿ ರಾಜ್ಯ ಕುಸ್ತಿ ಸಂಸ್ಥೆ ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ವಿ.ಆರ್.ಡಿ.ಎಂ ಟ್ರಸ್ಟ ಹಳಿಯಾಳ, ಉತ್ಕರ್ಷ ಸಮಗ್ರ ಗ್ರಾಮೀಣ ಅಭಿವೃದ್ದಿ ಯೋಜನೆ ರವರ ಸಹಯೋಗದಲ್ಲಿ ನಡೆದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕುಸ್ತಿಯ ಕೊನೆಯ ದಿನವಾದ ಸೋಮವಾರ ನಡೆದ ಕುಸ್ತಿ ವಿಜೇತ ಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.ಮುಂದಿನ ವರ್ಷ ಹಳಿಯಾಳದಲ್ಲಿ ಮೊದಲನೇ ಪ್ರಶಸ್ತಿಯ ಕುಸ್ತಿಗೆ ಮೊದಲನೇ ಬಹುಮಾನವನ್ನು ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಹಾಗೂ ಬೆಳ್ಳಿ ಗದೆ, ಎರಡನೇ ಬಹುಮಾನವನ್ನು ಎಪ್ಪತೈದು ಸಾವಿರ ಬೆಳ್ಳಿ ಗದೆ, ಮೂರನೇ ಬಹುಮಾನ ಐವತ್ತು ಸಾವಿರಗಳನ್ನು ನೀಡಲಾಗುವುದು.
ಕಾರವಾರದಿಂದ ಕುಸ್ತಿ ವಸತಿ ಕ್ರೀಡಾ ಶಾಲೆಯನ್ನು ಹಳಿಯಾಳಕ್ಕೆ ಸ್ಥಳಾಂತರಿಸಲು ಸಹಕರಿಸಿದ ಕ್ರೀಡಾ ಸಚಿವ ಜನಾರ್ದನ ರೆಡ್ಡಿಯವರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ, ಕುಸ್ತಿ ಪಂದ್ಯಾವಳಿ ಸಂಘಟನಾ ಕಾರ್ಯದರ್ಶಿ ಯಶವಂತ ಸ್ವಾಮೀಜಿ, ಆರ್.ಆರ್. ಮಠಪತಿ, ಜಿ.ಪಂ. ಅಧ್ಯಕ್ಷೆ ಲಮಾಣಿ, ಮುಖಂಡ ಕೈತಾನ ಬಾರಬೋಜಾ ಉಪಸ್ಥಿತರಿದ್ದರು.