ಹಳೇಬೀಡು: ಇಲ್ಲಿನ ಹೊಯ್ಸಳೇಶ್ವರ ದೇವಾಲಯ ರಸ್ತೆಯ ಪೊಲೀಸ್ ವಸತಿಗೃಹದ ಮುಂಭಾಗ ಕಸದ ರಾಶಿ ಹರಡಿದೆ, ಚರಂಡಿಯ ಕೊಳಕು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ.
ರಸ್ತೆ ಅಸ್ವಚ್ಛತೆ ತಾಂಡವವಾಡುತ್ತಿದ್ದರೂ ಗ್ರಾಮ ಪಂಚಾಯಿತಿಯವರು ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಚರಂಡಿಯ ಕೊಳಕು ನೀರು ರಸ್ತೆಯ್ಲ್ಲಲೇ ಹರಿಯುತ್ತಿದ್ದು ವಾಹನಗಳು ಸಂಚರಿಸುವಾಗ ರಸ್ತೆ ಬದಿಯಲ್ಲಿ ಓಡಾಡುವ ಜನರ ಮೇಲೆ ತ್ಯಾಜ್ಯ ಚಿಮ್ಮುತ್ತದೆ. ಸರ್ಕಾರಿ ಶಾಲೆಯ ಮುಂಭಾಗದಲ್ಲಿಯೂ ಇದೇ ದುಸ್ಥಿತಿ ಇದ್ದು ಬಿಸಿಯೂಟಕ್ಕೆ ಆಗಮಿಸುವ ಮಕ್ಕಳು ಕೊಚ್ಚೆ ದಾಟಿಕೊಂಡು ಶಾಲೆಯೊಳಕ್ಕೆ ಹೋಗಬೇಕಾಗಿದೆ. ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರಲ್ಲಿ ಆವರಿಸಿದೆ.
`ರಸ್ತೆ ಬದಿಯ ಕಸ ವಿಲೆವಾರಿಯಾಗಿಲ್ಲ, ಪೊಲೀಸ್ ವಸತಿಗೃಹದ ತ್ಯಾಜ್ಯ ನೀರು ಹೊರಕ್ಕೆ ಹೋಗಲು ಸೂಕ್ತ ಮಾಡಿಲ್ಲದಿರುವುದು ಸಮಸ್ಯೆ ಉದ್ಬವಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯಿತಿಯವರು ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಪೊಲೀಸ್ ವಸತಿ ಗೃಹದ ಬಳಿಯ ನಿವಾಸಿ ಬಿ.ಎಸ್.ಸೋಮಶೇಖರ್.
ಪೊಲೀಸ್ ವಸತಿಗೃಹದ ಬಳಿಯ ಚರಂಡಿಯ ಕೊಚ್ಚೆ ರಸ್ತೆಯಲ್ಲಿ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ಕಾರ್ಮಿಕರ ಸಮಸ್ಯೆಯಿಂದಾಗಿ ಕೆಲಸ ತಡವಾಗಿದೆ. ಶೀಘ್ರದಲ್ಲಿಯೇ ಕಸವಿಲೇವಾರಿ, ಚರಂಡಿ ತ್ಯಾಜ್ಯ ರಸ್ತೆಯಲ್ಲಿ ಹರಿಯದಂತೆ ಸೂಕ್ತ ವ್ಯವಸ್ಥೆ ಮಾಡುಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ತಿಳಿಸಿದ್ದಾರೆ.