ನವ ದೆಹಲಿ (ಪಿಟಿಐ): ಮುಂಬೈ ದಾಳಿ ರೂವಾರಿ ಅಜ್ಮಲ್ ಕಸಬ್ ಗೆ ವಿಶೇಷ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.
ಮರಣದಂಡನೆ ನೀಡುವಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಪಾಲಿಸಲಾಗಿದೆಯೇ ಎಂಬುದನ್ನು ವಿವರವಾಗಿ ಪರಿಶೀಲಿಸಲು ತಾನು ಬಯಸುವುದಾಗಿ ನ್ಯಾಯಾಲಯವು ತೀರ್ಪನ್ನು ಪ್ರಶ್ನಿಸಿ ಕಸಬ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುತ್ತಾ ಹೇಳಿತು.
ಕಸಬ್ ಮನವಿಯನ್ನು ಸರಾಸಗಟಾಗಿ ತಿರಸ್ಕರಿಸಲು ಹಲವರು ಬಯಸಿದ್ದರೂ ಕಾನೂನು ಪ್ರಕ್ರಿಯೆಯ ಪಾಲನೆ ವಿಚಾರದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಮುಂದೆ ಬಂದಿರುವ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ಅವರನ್ನು ಶ್ಲಾಘಿಸುವುದಾಗಿ ಪೀಠವು ಹೇಳಿತು.
ನ್ಯಾಯಮೂರ್ತಿಗಳಾದ ಅಫ್ತಬ್ ಅಲಮ್ ಹಾಗೂ ಸಿ.ಕೆ.ಪ್ರಸಾದ್ ಅವರನ್ನೊಳಗೊಂಡ ವಿಶೇಷ ಪೀಠವು ವಿಶೇಷ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಕಸಾಬ್ ಗೆ ಅನುಮತಿ ನೀಡಿತ್ತು. ಇದೇ ವೇಳೆಯಲ್ಲಿ ಮನವಿಯನ್ನು ತುರ್ತಾಗಿ ಇತ್ಯರ್ಥ್ಯಗೊಳಿಸಲು ಒಪ್ಪಿತು.