ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಇಂದಿನ ಸರ್ಕಾರಕ್ಕೆ ಗೌರವ ಇಲ್ಲ’ ಎಂದು ಅದರ ಅಧ್ಯಕ್ಷ ಪುಂಡಲೀಕ ಹಾಲಂಬಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ‘ಆರೋಪ ನಿರಾಧಾರ. ಸರ್ಕಾರವು ಪರಿಷತ್ತನ್ನು ಯಾವ ಸಂದರ್ಭದಲ್ಲೂ ಕಡೆಗಣಿಸಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಲಂಬಿ, ‘ಪರಿಷತ್ತಿಗೆ ಅನುದಾನ ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಅನುದಾನ ಕೊಡಿ ಎಂದು ನಾವು ಭಿಕ್ಷಾಪಾತ್ರೆ ಹಿಡಿಯಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮಡಿಕೇರಿಯಲ್ಲಿ ಜನವರಿ 7ರಿಂದ 9ರವರೆಗೆ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರೂ 1 ಕೋಟಿ ಅನುದಾನವನ್ನು ಇದೇ 7ರಂದು ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಆಧರಿಸಿ, ಹೆಚ್ಚುವರಿಯಾಗಿ ರೂ 1 ಕೋಟಿ ಅನುದಾನ ಬಿಡುಗಡೆಗೆ ಇದೇ 10ರಂದು ಆದೇಶಿಸಲಾಗಿದೆ ಎಂದು ಉಮಾಶ್ರೀ ವಿವರಣೆ ನೀಡಿದ್ದಾರೆ.
ಪರಿಷತ್ತಿನ ಆಡಳಿತದ ಖರ್ಚುಗಳಿಗಾಗಿ ರೂ 1.10 ಕೋಟಿ ಬಿಡುಗಡೆ ಮಾಡಲಾಗಿದೆ. ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಒಟ್ಟು ರೂ 3.5 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಪರಿಷತ್ತಿನ ಶತಮಾನೋತ್ಸವ ಆಚರಣೆಗೆ ರೂ 11.90 ಕೋಟಿ ಬೇಕು ಎಂದು ಹಾಲಂಬಿ ಅವರು ಮುಖ್ಯಮಂತ್ರಿಸಿದ್ದರಾಮಯ್ಯ ಅವರನ್ನು ಕೋರಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯವರು ಪೂರಕವಾಗಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಇಷ್ಟೊಂದು ಆಕ್ರೋಶ ಏಕೆ?