ಮಡಿಕೇರಿ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಡಾ.ಕೆ. ಕಸ್ತೂರಿರಂಗನ್ ಸಮಿತಿಯು ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕೊಡಗು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳು ನಿರ್ಣಯ ಕೈಗೊಳ್ಳಲು ಆರಂಭಿಸಿವೆ.
ಜಿಲ್ಲೆಯ ದೇವರಪುರ, ತಿತಿಮತಿ, ಮಾಯಮುಡಿ, ಕಾನೂರು, ಕುಟ್ಟ, ಬಾಳೆಲೆ, ಬೆಟ್ಟಗೇರಿ, ಬಿಟ್ಟಂಗಾಲ, ನಾಪೋಕ್ಲು, ನಿಟ್ಟೂರು ಹಾಗೂ ಭಾಗಮಂಡಲ ಗ್ರಾಮ ಪಂಚಾಯಿತಿಗಳು ನಿರ್ಣಯ ಕೈಗೊಂಡಿದ್ದು, ಬಾಕಿ ಉಳಿದಿರುವ ಗ್ರಾಮ ಪಂಚಾಯಿತಿಗಳೂ ನಿರ್ಣಯ ಕೈಗೊಳ್ಳಲು ಚಿಂತನೆ ನಡೆಸಿವೆ.
ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಗೆ ಜಿಲ್ಲೆಯ 55 ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಈ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕಸ್ತೂರಿರಂಗನ್ ಸಮಿತಿಯ ವರದಿಯಲ್ಲಿ ಗುರುತಿಸಲಾಗಿದೆ. ಅಲ್ಲದೇ, ಸೂಕ್ಷ್ಮ ಪರಿಸರ ವಲಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಈ ವರದಿಯ ಶಿಫಾರಸುಗಳು ಅನುಷ್ಠಾನಗೊಂಡರೆ ಇಲ್ಲಿನ ಜನರ ಜೀವನ ಅಸ್ತವ್ಯಸ್ಥವಾಗಲಿದೆ ಎಂದು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರವು ಅಂಗೀಕರಿಸಿದ್ದು, ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳ ಸರ್ಕಾರಕ್ಕೆ ಸೂಚಿಸಿದೆ. ವರದಿಯನ್ನು ವಿರೋಧಿಸಿ ನೆರೆಯ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈಗ ಕೊಡಗಿನಲ್ಲೂ ಪ್ರತಿರೋಧದ ಅಲೆ ಕೇಳಿ ಬರುತ್ತಿದೆ.
ಚರ್ಚೆಗೆ ಒತ್ತಾಯ: ‘ಸ್ಥಳೀಯರ ಗಮನಕ್ಕೆ ತರದೇ ಈ ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿಸಲಾಗಿದೆ. ಸಮಿತಿಯ ಶಿಫಾರಸುಗಳ ಬಗ್ಗೆ ಆಳವಾಗಿ ಅಧ್ಯಯನವಾಗಿಲ್ಲ. ಸಾರ್ವಜನಿಕವಾಗಿಯೂ ಚರ್ಚಿಸಿಲ್ಲ, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯವನ್ನೂ ಆಲಿಸಿಲ್ಲ’ ಎಂದು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ ದೂರುತ್ತಾರೆ.
‘ಸಮಿತಿಯ ಶಿಫಾರಸುಗಳು ಜಾರಿಯಾದರೆ ಅರಣ್ಯ ಕಾನೂನುಗಳು ಬಿಗಿಯಾಗುತ್ತವೆ. ಈ ಪ್ರದೇಶದ ಜನರಿಗೆ ವಾಸಿಸಲು ಅಸಾಧ್ಯ ಎನ್ನುವಂತಹ ವಾತಾವರಣ ಸೃಷ್ಟಿಯಾಗುತ್ತದೆ. ಕ್ವಾರಿ (ಕಲ್ಲು ಗಣಿಗಾರಿಕೆ) ಮಾಡಬಾರದು, ಮರಳು ತೆಗೆಯಬಾರದು ಎನ್ನುವ ನಿರ್ಬಂಧವನ್ನು ಹೇರಿದರೆ ಇಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯ? ಮನೆ ಕಟ್ಟಲು ಕೂಡ ಸಾಧ್ಯವಾಗುವುದಿಲ್ಲ. ಅರಣ್ಯ ರಕ್ಷಣೆಯ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
‘ನಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ವರದಿಯನ್ನು ಅನುಷ್ಠಾನಗೊಳಿಸದಂತೆ ಕೈಗೊಳ್ಳಲಾಗಿರುವ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ವರದಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವರಿಕೆ ಮಾಡಿಕೊಡಲಿ’ ಎಂದರು.
ಗ್ರಾಮ ಪಂಚಾಯಿತಿಗಳಲ್ಲದೇ, ಕೊಡವ ಸಮಾಜ, ಗೌಡ ಸಮಾಜ, ಆದಿವಾಸಿಗಳ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕೂಡ ವಿರೋಧ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.
ಮುಕ್ತ ಚರ್ಚೆಯಾಗಲಿ: ‘ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯಗಳನ್ನು ಹೊಂದಿರುವ ಪಶ್ಚಿಮ ಘಟ್ಟದ ರಕ್ಷಣೆಯಾಗಬೇಕು. ಈ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳ ಬಗ್ಗೆ ಚರ್ಚೆಯಾಗಲಿ. ಇದರಲ್ಲಿರುವ ಒಳ್ಳೆಯ ಅಂಶಗಳನ್ನು ಒಪ್ಪಿಕೊಂಡು, ನಕಾರಾತ್ಮಕ ಅಂಶಗಳ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕರ್ನಲ್ (ನಿವೃತ್ತ) ಸಿ.ಪಿ. ಮುತ್ತಣ್ಣ ಹೇಳಿದರು.
ವರದಿಯನ್ನು ವಿರೋಧಿಸುತ್ತಿರುವ ಬಹಳಷ್ಟು ಜನರು ಈ ವರದಿಯನ್ನು ಓದಿಲ್ಲ. ಯಾರೋ ಒಬ್ಬರು ವಿರೋಧಿಸುತ್ತಿದ್ದಾರೆ ಎಂದು ಇವರೂ ವಿರೋಧಿಸುತ್ತಿದ್ದಾರೆ. ವರದಿಯ ಶಿಫಾರಸುಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಮಡಿಕೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂತಹದೊಂದು ಚರ್ಚಾಗೋಷ್ಠಿ ಆಯೋಜಿಸಿದರೆ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಅವರು ನುಡಿದರು.
ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ?
ಮಡಿಕೇರಿಯಲ್ಲಿ ಜನವರಿ ಏಳರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಚರ್ಚಾಗೋಷ್ಠಿಯಲ್ಲಿ ಕೊಡಗಿನ ಪರಿಸರ ಸಂರಕ್ಷಣೆ ಕುರಿತು ಚರ್ಚಿಸಲು ಅವಕಾಶ ದೊರೆಯುವ ಸಾಧ್ಯತೆ ಇದೆ’ ಎಂದು ಸಮ್ಮೇಳನದ ಆತಿಥ್ಯ ವಹಿಸಿರುವ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದರು.
ಚರ್ಚಾಗೋಷ್ಠಿಯ ವಿಷಯಗಳನ್ನು ರಾಜ್ಯ ಸಮಿತಿ ನಿರ್ಧರಿಸಲಿದ್ದು, ಕೊಡಗಿಗೆ ಸಂಬಂಧಿಸಿದಂತೆ ಪರಿಸರ ರಕ್ಷಣೆ, ಪ್ರವಾಸೋದ್ಯಮ ಕುರಿತು ಚರ್ಚೆಗೆ ಅವಕಾಶ ‘ಚರ್ಚಾಗೋಷ್ಠಿಯಲ್ಲಿ ಪರ ಹಾಗೂ ವಿರೋಧ ಎರಡೂ ಕಡೆಯಿಂದ ಚರ್ಚೆ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಸಂಘರ್ಷಕ್ಕೆ ಎಡೆಮಾಡದೆ, ತಾಳ್ಮೆಯಿಂದ ಎರಡೂ ಕಡೆಯ ವಾದಗಳನ್ನು ಸಭಿಕರು ಆಲಿಸಬೇಕು’ ಎಂದು ಅವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.