ಇಂಫಾಲ (ಪಿಟಿಐ): ಮಣಿಪುರ ಚುನಾವಣಾ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ಕಳೆದ ಹದಿನೈದು ದಿನಗಳಿಂದಲೂ ಬಂಡುಕೋರರು ದಾಳಿ ಮುಂದುವರಿಸಿದ್ದಾರೆ.
ಜನವರಿ 28ರಂದು ನಡೆಯಲಿರುವ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ಅಭ್ಯರ್ಥಿಗಳಿಗೆ ಬಂಡುಕೋರರು ಒತ್ತಾಯಿಸಿದ್ದಾರೆ.
ಇಂಫಾಲದ ಪಶ್ಚಿಮ ಜಿಲ್ಲೆಯಲ್ಲಿನ ಲಂಗಥಾಬಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಬ್ಲ್ಯೂ. ಶಾಮ ಮನೆ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಇದೇ ಜಿಲ್ಲೆಯಲ್ಲಿ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸ್ಫೋಟಕಗಳನ್ನು ಎಸೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆದಾಗ್ಯೂ, ಯಾವುದೇ ಅನಾಹುತ ಸಂಭವಿಸಿಲ್ಲ. ಬಂಡುಕೋರರಿಂದ ಕಾಂಗ್ರೆಸ್ ವಿರೋಧ ಎದುರಿಸುತ್ತಿದ್ದು, ತಮ್ಮ ಕ್ರಾಂತಿಕಾರಿ ಚಳವಳಿಗೆ ಪಕ್ಷ ವಿರೋಧಿಸುತ್ತದೆ ಎಂದು ಬಂಡುಕೋರರು ತಿಳಿದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ನಿಯಂತ್ರಣ ಕೊಠಡಿಗೆ ಬಿಜೆಪಿ ಮನವಿ: ಮಣಿಪುರ ಅದರಲ್ಲೂ ಮುಖ್ಯಮಂತ್ರಿ ಓ ಇಬೊಬಿ ಸಿಂಗ್ ಅವರ ಎದುರು ತಮ್ಮ ಪಕ್ಷದಿಂದ ಇಂದಿರಾ ಸ್ಪರ್ಧಿಸಿರುವ ಥೌಬಲ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನಿಯಂತ್ರಣ ಕೊಠಡಿ ಸ್ಥಾಪಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ವಕ್ತಾರರು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದು, ನಿಯಂತ್ರಣ ಕೊಠಡಿ ಸ್ಥಾಪಿಸಿದರೆ ಇದು ದಿನವಿಡೀ ಕಾರ್ಯನಿರ್ವಹಿಸಲಿದೆ. ತಮ್ಮ ಅಭ್ಯರ್ಥಿಗೆ ಕೇಂದ್ರೀಯ ಪಡೆಗಳಿಂದ ಭದ್ರತೆ ದೊರೆಯುತ್ತದೆ ಎಂದಿದ್ದಾರೆ.