ಮುಧೋಳ: ಮತದಾರರ ಪಟ್ಟಿಯಲ್ಲಿ ಅಕ್ರಮ ಹೆಸರು ಸೇರ್ಪಡೆಯಾಗುತ್ತಿದೆ ಎಂದು ಆರೋಪಿಸಿ ನಡೆಸಿದ ಪ್ರತಿಭಟನೆ ಜಮಖಂಡಿ ಕಂದಾಯ ಉಪವಿಭಾಗಾ ಧಿಕಾರಿ ಹಾಗೂ ಡಿಎಸ್ಪಿ ಅವರ ಭರ ವಸೆ ಮೇರೆಗೆ ಕಾಂಗ್ರೆಸ್ಕಾರ್ಯ ಕರ್ತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದರು.
ಆದರೆ ಸಂಜೆ 5 ಸುಮಾರಿಗೆ ಸುಮಾರು 60ಕ್ಕಿಂತ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ನುಗ್ಗಿ ಕಂಪ್ಯೂಟರ್ ಹಾರ್ಡ್ ಡಿಸ್ಕ ನೀಡುವಂತೆ ಒತ್ತಾಯಿಸಿ ಕೆಲಸಕ್ಕೆ ಅಡಚಣೆಮಾಡಿದ್ದಲ್ಲದೆ ದೈಹಿಕ ಹಲ್ಲೆಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪೊಲೀಸರು ಆಗಮಿಸಿ ಹೊರಗೆ ಕಳುಹಿಸಿದ್ದಾರೆ.
ಈ ಕುರಿತು ತಹಶೀಲ್ದಾರ ಕಚೇ ರಿಯ ಶಿರಸ್ತೇದಾರ ಕಡಕೋಳ ಅವರು 60 ಜನರ ಮೇಲೆ ದೂರು ನೀಡಿದ್ದಾರೆ. ಸಿಪಿಐ ಎಚ್.ಡಿ.ಮುದರಡ್ಡಿ ದೂರು ನೀಡಿರುವುದನ್ನು ಖಚಿತಪಡಿಸಿ ಹಲ್ಲೆಗೈದವರ ಮೇಲೆ ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ.
`ಕಾಂಗ್ರೆಸ್ ಗೆಲವು ಖಚಿತ'
ಮುಧೋಳ: ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಗಾಳಿ ಬೀಸಿದ್ದು ಜನರು ಸ್ವಯಂ ಪ್ರೇರಣೆಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯ ಗಳು ಹಾಗೂ ಎರಡು ಅವಧಿಗೆ ಈ ಕ್ಷೇತ್ರಕ್ಕೆ ಸಲ್ಲಿಸಿದ ಮಾದರಿ ಸೇವೆ ಯನ್ನು ಮನ್ನಿಸಿ ಮತದಾರರು ಕಾಂಗ್ರೆಸ್ ಅನ್ನು ಆಯ್ಕೆಮಾಡುತ್ತಾರೆ ಎಂದು ಆರ್.ಬಿ.ತಿಮ್ಮಾಪುರ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ರಮವಾಗಿ ಮತಾದರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತಿದ್ದು, ಇದನ್ನು ತಕ್ಷಣ ಕೈಬಿಟ್ಟು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಈ ಕೃತ್ಯದಲ್ಲಿ ಸಚಿವರ ಸಂಬಂಧಿ ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ. ಕಡಪಟ್ಟಿ, ಸೈಯದಸಾಬ್ ಹುಬ್ಬಳಿಕರ, ದುಂಡಪ್ಪ ಬರಮನಿ, ಯಶವಂತ ಚವ್ಹಾಣ, ಕೃಷ್ಣಪ್ಪ ಕನಕರಡ್ಡಿ, ಡಿ.ಬಿ. ಜೈನಾಪುರ, ಕೆ.ಆರ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.