ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಭ್ರಷ್ಟರ ತವರು ಮನೆ: ಜೋಶಿ

Last Updated 22 ಏಪ್ರಿಲ್ 2013, 6:31 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಇಂದಿನ ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರಿಗಳು ತುಂಬಿದ್ದು  ಕಾಂಗ್ರೆಸ್ ಭ್ರಷ್ಟಾಚಾರಿಗಳ ತವರು ಮನೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ  ಅಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಸ್ಥಳೀಯ ಪುರಸಭೆ ಮುಂದಿನ ಬಯಲಿನಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ರಾಮಣ್ಣ ಲಮಾಣಿ ಅವರ ಚುನಾವಣಾ ಪ್ರಚಾರ ಭಾಷಣ ಮಾಡಿ  ಮಾತನಾಡಿದರು.

ರಾಜ್ಯ ಬಿಜೆಪಿಯಲ್ಲೂ ಕೆಲ ಭ್ರಷ್ಟಾಚಾರಿಗಳಿದ್ದದ್ದು ನಿಜ. ಆದರೆ ಬಿಜೆಪಿ ಅಂಥವರನ್ನು ಪಕ್ಷದಿಂದ ದೂರ ಉಳಿಸಿಕೊಂಡಿದೆ. ಆದರೆ, ಕಾಂಗ್ರೆಸ್‌ನಲ್ಲಿ ಲೆಕ್ಕ ವಿಲ್ಲದಷ್ಟು ಭ್ರಷ್ಟಾಚಾರಿಗಳು ಇದ್ದರೂ ಕಾಂಗ್ರೆಸ್ ಮಾತ್ರ ಅವರನ್ನು ಕೈ ಬಿಡುವುದರ ಬದಲು ಅವರನ್ನು ಪೋಷಿಸುತ್ತಿದೆ ಎಂದು ಟೀಕಿಸಿದರು.

2-ಜಿ ಹಗರಣ, ಕಲ್ಲಿದ್ದಲು, ಒಲಂಪಿಕ್ ಕ್ರೀಡಾ ಕೂಟಗಳಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಸಿಎಜಿ ವರದಿ ತಿಳಿಸಿದೆ. ಆದರೂ ಸಹ ಕಾಂಗ್ರೆಸ್ ಭ್ರಷ್ಟಾ ಚಾರಿಗಳನ್ನು ಶಿಕ್ಷಿಸುವುದರ ಬದಲು ಅವರ ರಕ್ಷಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಯಾಗಿದೆ ಎಂದರು.   

ಸಂಪೂರ್ಣ ಹದಗೆಟ್ಟಿದ್ದ ಲಕ್ಷ್ಮೇಶ್ವರ-ಹುಬ್ಬಳ್ಳಿ ರಸ್ತೆ ನಿರ್ಮಿಸಿದ್ದು ಹಾಗೂ ಹೊಸ ತಾಲ್ಲೂಕುಗಳ ಘೋಷಣೆ ಮಾಡಿದ್ದು ಬಿಜೆಪಿ ಸಾಧನೆ ಆಗಿದೆ ಎಂದು ಬಣ್ಣಿಸಿದ ಅವರು ಶಾಸಕ ರಾಮಣ್ಣ ಲಮಾಣಿ ಸಂಪನ್ನ ವ್ಯಕ್ತಿಯಾಗಿದ್ದು ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಕ್ಷೇತ್ರದ ಒಲುವು ಗಳಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ರಾಮಣ್ಣ ಲಮಾಣಿ ಮತ್ತೆ ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ ಕ್ಷೇತ್ರದ ಪ್ರಗತಿಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅತೀ ಹೆಚ್ಚಿನ ಅನುದಾನ ನೀಡಿದ್ದು ಶಿರಹಟ್ಟಿ ಮತ್ತು ಮುಂಡರಗಿ ತಾಲ್ಲೂಕುಗಳಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಈ ಚುನಾವಣೆಯಲ್ಲಿ ಮತ್ತೆ ಮತದಾರರು ಮತ ನೀಡಬೇಕು ಎಂದು ಮನವಿ ಮಾಡಿದರು. ಡಾ.ವೈ.ಎಫ್. ಹಂಜಿ, ಸೋಮಣ್ಣ ಮುಳಗುಂದ ಮಾತನಾಡಿದರು.

ಬಿಜೆಪಿ ಹಿರಿಯ ಧುರೀಣ ನಿಂಗರಾಜ ಪಾಟೀಲ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ  ಎಂ.ಎಸ್. ಕರಿಗೌಡ್ರ, ತಾಲ್ಲೂಕು ಘಟಕದ ಕರಬಸಪ್ಪ ಹಂಚಿನಾಳ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಕುಲಕರ್ಣಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ  ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಸವಣ್ಣೆಪ್ಪ ಹಂಜಗಿ, ಪುರಸಭೆ ಮಾಜಿ ಸದಸ್ಯ ಗೋವಿಂದಪ್ಪ ಶೆರಸೂರಿ, ಲಂಕೆಪ್ಪ ಶೆರಸೂರಿ, ಕಾರ್ಮಿಕ ಸಂಘದ ನಾಯಕ ಗೋವಿಂದಪ್ಪ ಶೆರಸೂರಿ ಈ ಸಂದರ್ಭದಲ್ಲಿ ಬಿಜೆಪಿಗೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT