ಶಿವಮೊಗ್ಗ: ~ಇಲ್ಲಿ ಬಂದು ಕಾರ್ಯಕ್ರಮ ಮಾಡಿ ಪೋಸು ಕೊಡುವ ಬದಲು ವಿಧಾನಸಭೆಯಲ್ಲಿ ನಿಮ್ಮ ಪೌರುಷ ತೋರಿಸಿ~ ಎಂದು ಭದ್ರಾವತಿ ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾ ಕಾಂಗ್ರೆಸ್ ಬುಧವಾರ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಎಬ್ಬಿಸಿದ ಘಟನೆ ನಡೆಯಿತು.
~ನಮ್ಮ ಶಾಸಕರ ಬೆಂಬಲಕ್ಕೆ ನೀವು ಬಂದಿಲ್ಲ. ಅಲ್ಲಿ ಶಕ್ತಿ ತೋರದವರು; ಇಲ್ಲಿ ಬಂದು ಯಾವ ಶಕ್ತಿ ತೋರುತ್ತೀರಿ~ ಎಂದು ಹೇಳಿ ಕೂಗಾಡಿದರು. ತಕ್ಷಣವೇ ವೇದಿಕೆ ಮೇಲಿದ್ದವರು ಗದ್ದಲ ಎಬ್ಬಿಸಿದವರನ್ನು ಹೊರಕ್ಕೆ ಕಳುಹಿಸಿದರು. ಸಂಪೂರ್ಣ ಕಾರ್ಯಕ್ರಮ ಗೌಜು-ಗದ್ದಲಗಳಿಂದಲೇ ಕೂಡಿತ್ತು. ಕೆಲ ಮಾಜಿ ಶಾಸಕರು ಆಗಮಿಸಿದಾಗ ಅವರ ಹಿಂಬಾಲಕರು ವೇದಿಕೆವರೆಗೆ ಆಗಮಿಸಿ, ಜೈಕಾರ ಕೂಗಿದರು.