ಬೆಂಗಳೂರು: ನೈತಿಕತೆ ಕುರಿತು ಕಾಂಗ್ರೆಸ್ನಿಂದ ಪಾಠ ಕಲಿಯಬೇಕಾದ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, `ಕಾಂಗ್ರೆಸ್ಸಿಗರ ಅನೈತಿಕ ವ್ಯವಹಾರಗಳ ಕನಿಷ್ಠ 25 ಪ್ರಕರಣಗಳನ್ನು ಉದಾಹರಿಸಬಲ್ಲೆ~ ಎಂದು ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣ ಕುರಿತು ವಿಚಾರಣೆಗೆ ಸಮಿತಿ ರಚಿಸಲಾಗಿದೆ. ಅದರ ವರದಿ ಬರುವವರೆಗೆ ಕಾಯುವ ವ್ಯವಧಾನವೂ ಕಾಂಗ್ರೆಸ್ಸಿಗರಿಗೆ ಇಲ್ಲ~ ಎಂದು ಟೀಕಿಸಿದರು.
`ಕಾಂಗ್ರೆಸ್ಸಿಗರು ಹಿಂದೆ ಮಾಡಿರುವ ಅನೈತಿಕ ವ್ಯವಹಾರಗಳು ಏನೆಂಬುದು ಲೋಕಕ್ಕೇ ತಿಳಿದಿರುವ ಸಂಗತಿ. ಅವುಗಳ ಕುರಿತು ನಾನು ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ. ಸದನದಲ್ಲಿ ಬೇರೆ ವಿಚಾರಗಳ ಕುರಿತು ಚರ್ಚೆ ನಡೆಸಲು ಆಗದ ಕಾಂಗ್ರೆಸ್ಸಿಗರು ಈ ಪ್ರಕರಣ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಪ್ರಕರಣದ ಕುರಿತು ಪ್ರತಿಪಕ್ಷಗಳ ಜೊತೆ ಬಹಿರಂಗ ಚರ್ಚೆಗೆ ಸಿದ್ಧ~ ಎಂದು ಹೇಳಿದರು.