ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯುವ ಬಹುತೇಕ ಅಭ್ಯರ್ಥಿಗಳಿಗೆ ಬುಧವಾರ ಪಕ್ಷದ ‘ಬಿ’ ಫಾರ್ಮ್ ವಿತರಿಸಲಾಗಿದೆ. ಕೆಲವರು ಖುದ್ದಾಗಿ ‘ಬಿ’ ಫಾರ್ಮ್ ಪಡೆದರೆ, ಇನ್ನು ಕೆಲವರು ತಮ್ಮ ಪ್ರತಿನಿಧಿಗಳ ಮೂಲಕ ತರಿಸಿಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ಕಚೇರಿಯಲ್ಲಿ ‘ಬಿ’ ಫಾರ್ಮ್ ವಿತರಿಸಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್, ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಶಾಸಕ ಎ.ಮಂಜು ಮತ್ತಿತರರು ಖುದ್ದಾಗಿ ‘ಬಿ’ ಫಾರ್ಮ್ ಸ್ವೀಕರಿಸಿದ್ದಾರೆ.
ನಿಲೇಕಣಿಗೆ ಶುಕ್ರವಾರ ‘ಬಿ’ ಫಾರ್ಮ್: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಅವರು ಇನ್ನೂ ‘ಬಿ’ ಫಾರ್ಮ್ ಪಡೆದುಕೊಂಡಿಲ್ಲ. ಶನಿವಾರ ಅವರು ನಾಮಪತ್ರ ಸಲ್ಲಿಸಲಿದ್ದು, ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಿಂದ ‘ಬಿ’ ಫಾರ್ಮ್ ಪಡೆದುಕೊಳ್ಳುವರು ಎಂದು ಗೊತ್ತಾಗಿದೆ.