ಸುವರ್ಣಸೌಧ (ಬೆಳಗಾವಿ): ಪಕ್ಷ ಮತ್ತು ಸರ್ಕಾರದ ನಡುವೆ ‘ಹೊಂದಾಣಿಕೆ ಇಲ್ಲ, ಅಂತರ ಸೃಷ್ಟಿಯಾಗಿದೆ’ ಎಂದು ಬಿಂಬಿಸಲು ಕೆಲವು ಶಾಸಕರು ಪ್ರಯತ್ನಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸರ್ಕಾರ ಮತ್ತು ಪಕ್ಷದ ನಡುವಿನ ಸಂಬಂಧ ಕುರಿತು ವದಂತಿ ಹಬ್ಬಿಸುವವರನ್ನು ಪತ್ತೆ ಹಚ್ಚುವುದಾಗಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸುವರ್ಣಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದೊಳಗಿನ ಬೆಳವಣಿಗೆಗಳು ಮತ್ತು ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರಿಗೆ ಅಸಮಾಧಾನವಿದೆ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೆಲವರು ಹಬ್ಬಿಸುತ್ತಿರುವ ವದಂತಿಯಿಂದ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ ಎಂದು ಮುಖ್ಯಮಂತ್ರಿಯವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಸರ್ಕಾರ ಮತ್ತು ಶಾಸಕರ ನಡುವೆ ಅಂತರವಿದೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಕೆಲವೇ ಜನರಿದ್ದಾರೆ. ಅಂತಹವರನ್ನು ಪತ್ತೆಮಾಡಬೇಕಿದೆ’ ಎಂದು ಸಭೆಯಲ್ಲಿ ಹೇಳುವ ಮೂಲಕ ಶಾಸಕರಿಗೆ ಬಿಸಿ ಮುಟ್ಟಿಸುವ ಯತ್ನ ಮಾಡಿದ್ದಾರೆ. ‘ಸಚಿವರ ಕಾರ್ಯವೈಖರಿ ಕುರಿತು ಕೆಪಿಸಿಸಿ ಅಥವಾ ಕಾಂಗ್ರೆಸ್ ಹೈಕಮಾಂಡ್ಗೆ ಶಾಸಕರ್ಯಾರೂ ಪತ್ರ ಬರೆದಿಲ್ಲ. ಆದರೂ 30–40 ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ವದಂತಿ ಹಬ್ಬಿಸಲಾಗುತ್ತಿದೆ.
ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ಇಲ್ಲ. ಆದರೂ ಆ ರೀತಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಎಲ್ಲ ಶಾಸಕರೂ ಸಹಕಾರ ನೀಡಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದರು ಎನ್ನಲಾಗಿದೆ. ತಮ್ಮ ಸರ್ಕಾರ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ. ಅವುಗಳಿಗೆ ಸರಿಯಾದ ಪ್ರಚಾರ ದೊರೆಯುತ್ತಿಲ್ಲ. ಶಾಸಕರ ಅಸಮಾಧಾನವಿದೆ ಎಂಬ ಗಾಳಿಸುದ್ದಿಯೇ ಅದಕ್ಕೆ ಅಡ್ಡಿಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.
‘ಕುಳಿತು ಕೆಲಸ ಮಾಡಿ’: ಪದೇಪದೇ ಸೂಚನೆ ನೀಡಿದರೂ ಕೆಲ ಸಚಿವರು ವಿಧಾನಸೌಧದ ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡದಿರುವುದು ಮತ್ತು ಶಾಸಕರ ಜೊತೆ ಸರಿಯಾಗಿ ನಡೆದುಕೊಳ್ಳದೇ ಇರುವ ಬಗ್ಗೆ ಮುಖ್ಯಮಂತ್ರಿಯವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಬಳಿಕ ಎಲ್ಲ ಸಚಿವರೂ ಕಡ್ಡಾಯವಾಗಿ ವಾರಕ್ಕೆ ಮೂರು ದಿನ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
‘ಸಚಿವರು ಕಾರ್ಯವೈಖರಿ ಬದಲಿಸಿಕೊಳ್ಳಬೇಕು ಎಂದು ಹಲವು ಬಾರಿ ಸೂಚನೆ ನೀಡಿದ್ದೇನೆ. ಆದರೆ, ಕೆಲವು ಸಚಿವರು ವಿಧಾನಸೌಧದ ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದಿಲ್ಲ ಎಂಬ ದೂರುಗಳಿವೆ. ಕೆಲವು ಸಚಿವರು ಶಾಸಕರ ಮಾತನ್ನು ನಿರ್ಲಕ್ಷಿಸುತ್ತಾರೆ ಎಂಬ ಬೇಸರ ಇದೆ. ಮತ್ತೆ ಆ ರೀತಿಯ ದೂರುಗಳು ಬರದಂತೆ ಕೆಲಸ ಮಾಡಿ’ ಎಂದು ಮುಖ್ಯಮಂತ್ರಿಯವರು ಖಡಕ್ ಆಗಿ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಮಾನ ಕೈಗೊಳ್ಳುವ ಮುನ್ನ ಸಚಿವರು ಸ್ಥಳೀಯ ಶಾಸಕರ ಜೊತೆ ಸಮಾಲೋಚನೆ ನಡೆಸಬೇಕು. ಪಕ್ಷದ ಮುಖಂಡರ ಸಲಹೆಗಳಿಗೂ ಮನ್ನಣೆ ನೀಡಬೇಕು. ಶಾಸಕರು ತಮ್ಮ ಬಳಿ ದೂರುಗಳನ್ನು ತರುವ ವಾತಾವರಣ ನಿರ್ಮಾಣ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷ ಗಮನಿಸುತ್ತಿದೆ: ‘ಸರ್ಕಾರದ ಕಾರ್ಯವೈಖರಿಯನ್ನು ಕೆಪಿಸಿಸಿ ಗಮನಿಸುತ್ತಿದೆ. ಆ ಬಗ್ಗೆ ಕೆಪಿಸಿಸಿ ಪ್ರಮುಖರು ಪಕ್ಷದ ಹೈಕಮಾಂಡ್ಗೆ ವರದಿ ಸಲ್ಲಿಸುತ್ತಾರೆ. ನಾನು ಕೂಡ ಪ್ರತ್ಯೇಕವಾಗಿ ಎಲ್ಲ ಸಚಿವರ ಬಗ್ಗೆಯೂ ಹೈಕಮಾಂಡ್ಗೆ ವರದಿ ನೀಡುತ್ತೇನೆ. ನೀವು ಎಷ್ಟು ಎಚ್ಚರಿಕೆಯಿಂದ ಕೆಲಸ ಮಾಡುತ್ತೀರೋ ಅಷ್ಟು ಉತ್ತಮ’ ಎಂದು ಸಿದ್ದರಾಮಯ್ಯ ಅವರು ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ.
ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳು, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಾಸಕರು ಕೂಡ ಮುಖ್ಯಮಂತ್ರಿಯವರ ಮುಂದೆ ಅಹವಾಲು ಹೇಳಿಕೊಂಡಿದ್ದಾರೆ. ಶಾಸಕರ ಕೋರಿಕೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿಯವರು ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.