ಮಂಡ್ಯ: ಮೀಸಲಾತಿ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದಲಿತರಿಗೆ ಮನ್ನಣೆ ನೀಡಿದ ಏಕೈಕ ಪಕ್ಷ ಜೆಡಿಎಸ್ ಎಂದು ಸಂಸದ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಪಕ್ಷದ ಪರಿಶಿಷ್ಟ ಜಾತಿ ಘಟಕದ ವತಿಯಿಂದ ನಡೆದ `ಜೆಡಿಎಸ್ ನಡಿಗೆ ದಲಿತರ ಹಟ್ಟಿಯ ಕಡೆಗೆ' ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ದಶಕಗಳ ಕಾಲ ಆಡಳಿತ ನಡೆಸಿದ್ದರೂ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡದೇ ವಂಚನೆ ಮಾಡಿದೆ ಎಂದು ದೂರಿದರು. ರಾಜಕೀಯ, ಶೈಕ್ಷಣಿಕ, ಉದ್ಯೋಗದಲ್ಲಿ ದಲಿತರಿಗೆ ಮೀಸಲಾತಿ ಒದಗಿಸಿದ್ದು ವರದಾನವಾಗಿದೆ. ದಲಿತರಿಗೆ ಮಾತ್ರವಲ್ಲದೇ, ಮುಸ್ಲಿಮರಿಗೂ ಮೀಸಲಾತಿ ಸೌಲಭ್ಯವನ್ನು ಜೆಡಿಎಸ್ ಆಡಳಿತದಲ್ಲಿಯೇ ಕಲ್ಪಿಸಲಾಗಿದೆ ಎಂದರು. ಜೆಡಿಎಸ್ ಪಕ್ಷವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಜ.2 ರಂದು ನಾಗಮಂಗಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಚಾರ ಆಂದೋಲನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿದರು. ಜೆಡಿಎಸ್ ಎಸ್ಸಿ/ಎಸ್ಟಿ ಘಟಕದ ರಾಜ್ಯ ಘಟಕದ ಅಧ್ಯಕ್ಷ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ತಮ್ಮಣ್ಣ ನಾಯಕ್, ಕೆ.ಸಿ.ರಮೇಶ್, ಗುರುಸಿದ್ದಯ್ಯ, ಭಾಗ್ಯಮ್ಮ ಹಾಜರಿದ್ದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಸಾಧನೆಗಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.