ಬ್ರಹ್ಮಾವರ: `ಕಾಂಗ್ರೆಸ್ ಸರ್ವಧರ್ಮ ಐಕ್ಯತೆ ಹೊಂದಿರುವ ಪಕ್ಷ. ಸತ್ಯ, ಶಾಂತಿ, ಅಹಿಂಸೆಯ ತತ್ವವನ್ನು ಪಾಲಿಸಿ ಮಹಾತ್ಮ ಗಾಂಧಿ ಕಂಡಿದ್ದ ಕನಸುಗಳನ್ನು ನನಸು ಮಾಡುವಂತಹ ಕಾರ್ಯಕ್ರಮಗಳನ್ನು ಪಕ್ಷವು ನಡೆಸುತ್ತಾ ಬಂದಿದೆ~ ಎಂದು ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಸೊರಕೆ ಹೇಳಿದರು.
ಸಾಲಿಗ್ರಾಮದಲ್ಲಿ ಬುಧವಾರ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಸ್ಥಾನೀಯ ಸಮಿತಿಯ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
`ರಾಜ್ಯ ಸರ್ಕಾರದ ನೀತಿಗಳು ಬಸವೇಶ್ವರರ ತತ್ವಕ್ಕೆ ತದ್ವಿರುದ್ಧವಾಗಿದೆ. ಮಂತ್ರಿಗಳು ಜೈಲಿಗೆ ಹೋಗುವ ಕಾರ್ಯಕ್ರಮ ನಿರಂತರ ನಡೆಯುತ್ತಿದೆ. ಭ್ರಷ್ಟಾಚಾರ ನಡೆಸಿರುವ ಮತ್ತು ರಾಜ್ಯದ ಸಂಪತ್ತು ಲೂಟಿ ಮಾಡಿ ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ರೆಡ್ಡಿಗಳು ಈಗ ಅಲ್ಯೂಮಿನಿಯಂ ತಟ್ಟೆಯಲ್ಲಿ ಉಣ್ಣುತ್ತಿದ್ದಾರೆ~ ಎಂದು ಲೇವಡಿ ಮಾಡಿದರು.
`ಹಗರಣಗಳ ಸಂತೆಯಲ್ಲಿ ಹುಟ್ಟಿದ ಕೂಸು ಸದಾನಂದ ಗೌಡ ಅವರ ಸರ್ಕಾರ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯನ್ನಾಗಲೀ, ಕಬ್ಬು ಬೆಳೆಗಾರರ ಸಂಕಷ್ಟಕ್ಕಾಗಲೀ, ಕಾರ್ಮಿಕರ ಸಮಸ್ಯೆಗಾಗಲೀ ಸ್ಪಂದಿಸದ ಸರ್ಕಾರ ರೈತರ ಪರವಾಗಿರಲು ಹೇಗೆ ಸಾಧ್ಯ?~ ಎಂದು ಅವರು ಪ್ರಶ್ನಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗೋಪಾಲ ಪೂಜಾರಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಪ.ಪಂ ಉಪಾಧ್ಯಕ್ಷೆ ಪ್ರಫುಲ್ಲಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ಕುಂದಾಪುರದ ಮಲ್ಯಾಡಿ ರಘುರಾಮ್ ಶೆಟ್ಟಿ, ಶಂಕರ್ ಕುಂದರ್, ಮಹಿಳಾ ಕಾಂಗ್ರೆಸ್ನ ಮಮತಾ ಶೆಟ್ಟಿ, ಯುವ ಕಾಂಗ್ರೆಸ್ನ ರಮೇಶ್ ಎಚ್ ಕುಂದರ್, ವಿನಯ್ ಕುಮಾರ್ ಕಬ್ಯಾಡಿ, ರೋಶನಿ ಒಲಿವೆರಾ, ನಾಗರಾಜ ಗಾಣಿಗ, ಅಚ್ಚುತ ಪೂಜಾರಿ ಮತ್ತಿತರರು ಇದ್ದರು.