ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಚಾಣ ಕಂತೆ!

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಿರ್ದೇಶಕ ಗಣೇಶ್ ತಲೆತುಂಬಾ ಪ್ರಚಾರದ ಹುಳು ಗುಂಯ್‌ಗುಡುತ್ತಿದೆ. ಅವರ ಮಾತು ಶುರುವಾದದ್ದೇ ಪ್ರಚಾರದ ವರಸೆಗಳನ್ನು ಹಂಚಿಕೊಳ್ಳುವುದರೊಂದಿಗೆ.

`ಕಾರ್ಪೋರೆಟ್ ಕಂಪೆನಿಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 3 ಸಾವಿರ ಟಿಕೆಟನ್ನು ಮುಂಗಡವಾಗಿಯೇ ಮಾರಾಟ ಮಾಡುತ್ತೇವೆ.
 
ಪ್ರಮುಖ ಊರುಗಳ ಚಿತ್ರಮಂದಿರಗಳಿಗೆ ಇಡೀ ಚಿತ್ರತಂಡ ತೆರಳಿ ಜನರೊಂದಿಗೆ ಬೆರೆತು ಪ್ರಚಾರ ಮಾಡುತ್ತೇವೆ. ಹೈದರಾಬಾದ್, ಚೆನ್ನೈ, ಮುಂಬೈಗಳಲ್ಲೂ ಚಿತ್ರ ಬಿಡುಗಡೆ ಮಾಡುತ್ತೇವೆ....~ ಹೀಗೆ ಒಂದಾದ ಮೇಲೊಂದರಂತೆ ಪ್ರಚಾರ ಪ್ರಣಾಳಿಕೆಯನ್ನು ಬಿಚ್ಚುತ್ತಾ ಹೋದರು.

ಈ ವಾರ ತೆರೆಕಾಣುತ್ತಿರುವ `ಕಾಂಚಾಣ~ ಚಿತ್ರದ ಪತ್ರಿಕಾಗೋಷ್ಠಿ ಅದು. ಬಹುತೇಕ ಸುದ್ದಿಗೋಷ್ಠಿಗಳಿಗೇ ಗೈರು ಹಾಜರಾಗುವ ನಾಯಕ ನಟ ದಿಗಂತ್ ಚಿತ್ರದ ಪ್ರಚಾರಕ್ಕೆ ನಿಮ್ಮ ಜೊತೆ ಊರೂರು ಸುತ್ತಲು ಬರುತ್ತಾರೆಯೇ? ಎಂಬ ಪ್ರಶ್ನೆ ಪತ್ರಕರ್ತರ ಸಾಲಿನಿಂದ ತೂರಿಬಂದಾಗ ಗಣೇಶ್ ಸ್ವಲ್ಪ ತಡವರಿಸಿದರು.

`ಹಾಗೇನೂ ಇಲ್ಲ. ದಿಗಂತ್ ಮುಂಬೈಗೆ ಹೋಗಿದ್ದಾರೆ. ಈಗ ಕೆಲವೇ ನಿಮಿಷಗಳ ಮುಂಚೆ ಫೋನ್ ಮಾಡಿದ್ದರು. ನಾಡಿದ್ದು ಖಂಡಿತ ಬರುತ್ತಾರೆ~ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು.

ದಿಗಂತ್ ಅನುಪಸ್ಥಿತಿ ಕಾಡದಂತೆ ತಡೆಯಲು ನಟಿ ರಾಗಿಣಿ ಪ್ರಯತ್ನಿಸಿದರು. ಎರಡು ವಾರದಲ್ಲಿ ಅವರ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅವರಿಗೆ ಸಾಕಷ್ಟು ಖುಷಿ ನೀಡಿದೆ.
 
`ಒಳ್ಳೆಯ ಕಥೆಯುಳ್ಳ ಚಿತ್ರ ಇದು. ಚೆನ್ನಾಗಿ ಮೂಡಿಬಂದಿದೆ~ ಎಂದು ಪಟಪಟನೆ ಮಾತುದುರಿಸಿದ ರಾಗಿಣಿ, ನಿರ್ದೇಶಕ ಗಣೇಶ್ ಮತ್ತು ನಿರ್ಮಾಪಕ ಶ್ರೀನಾಥ್ ರೆಡ್ಡಿ ಅವರನ್ನು ಹೊಗಳಿದರು. ಚಿತ್ರದಲ್ಲಿ ಅವರು ದಿಗಂತ್‌ಗೆ ಬಾಲ್ಯದ ಗೆಳತಿಯಂತೆ.

`ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳದ ದಿಗಂತ್‌ರನ್ನು ಸರಿದಾರಿಗೆ ತರುವ ಪಾತ್ರ ನನ್ನದು. ಇಡೀ ಚಿತ್ರ ದುಡ್ಡಿನ ಕುರಿತೇ ಸಾಗುತ್ತದೆ~ ಎಂದು ಹೇಳಿದರು.
ಮನೆ ಸಮೀಪದಲ್ಲಿದ್ದ ಸದಾ ಬಾಗಿಲು ತೆರೆದಿರುವ ಎಟಿಎಂ ಅನ್ನು ದಿನವೂ ನೋಡಿ ನೋಡಿ ಗಣೇಶ್‌ಗೆ ದುಡ್ಡಿನ ಮೇಲೆ ಸಿನಿಮಾ ಮಾಡುವ ಬಯಕೆ ಹುಟ್ಟಿತಂತೆ.

`ದುಡ್ಡಿನ ಕುರಿತು ಸಾಕಷ್ಟು ಚಿತ್ರ ಬಂದಿರಬಹುದು. ಆದರೆ ನನ್ನ ಚಿತ್ರದಲ್ಲಿ ಯಾವುದೇ ಚಿತ್ರದ ಛಾಯೆಯ ಲವಲೇಶವೂ ಕಾಣುವುದಿಲ್ಲ. ಇದು ಸಂಪೂರ್ಣ ವಿಭಿನ್ನ ಚಿತ್ರ~ ಎಂದು ಅವರು ತಮಗೇ ಸರ್ಟಿಫಿಕೇಟ್ ಕೊಟ್ಟುಕೊಂಡರು.

ನಿರ್ಮಾಪಕ ಶ್ರೀನಾಥ್ ರೆಡ್ಡಿ ಅವರಿಗೆ `ಮರ್ಯಾದೆ ರಾಮಣ್ಣ~ ಚಿತ್ರದಿಂದ ಎದುರಿಸಬೇಕಾದ ಪೈಪೋಟಿ ಬಗ್ಗೆ ಆತಂಕವಿದೆ. ಆದರೆ ಆ ಚಿತ್ರಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ಇದು ದುಡ್ಡಿನ ಯುಗ. ಎಲ್ಲೆಡೆ ಕಾಂಚಾಣ ಸದ್ದು ಮಾಡುತ್ತಿದೆ. ಹಾಗಾಗಿ ಚಿತ್ರವೂ ತಮ್ಮ ಭರವಸೆಯನ್ನು ಉಳಿಸುತ್ತದೆ ಎಂಬುದು ನಿರ್ಮಾಪಕರ ನಂಬಿಕೆ.
     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT