ಚನ್ನರಾಯಪಟ್ಟಣ: ಮುದ್ದನಹಳ್ಳಿ ಗೇಟ್ ಬಳಿ ಕೈಗೊಂಡಿರುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಲುವೆ ಕಾಮಗಾರಿ ಕಳಪೆಯಾಗಿದೆ ಎಂದು ಜೋಡಿಗಟ್ಟೆ- ಹಿರೀಹಳ್ಳಿ ಗ್ರಾಮಸ್ಥರು ಭಾನುವಾರ ದೂರಿದರು.
250 ಮೀಟರ್ ಉ್ದ್ದದದ ಕಾಲುವೆ ನಿರ್ಮಿಸುವಲ್ಲಿ ಎರಡೂ ಕಡೆಯ ಮಣ್ಣು ಸರಿಯಾಗಿ ರೋಲರ್ ಮಾಡಿಲ್ಲ. 4 ಇಂಚು ಕಾಂಕ್ರೀಟ್ ಹಾಕುವ ಬದಲು ಒಂದು ಇಂಚು ಹಾಕಲಾಗಿದೆ. ಇದರಿಂದ ಕಾಂಕ್ರೀಟ್ ಕಿತ್ತು ಬರುವ ರೀತಿಯಲ್ಲಿದೆ. ಇಡೀ ಕಾಮಗಾರಿಯ ನಿರ್ವಹಣೆ ಅಸಮರ್ಪಕವಾಗಿ ನಡೆದಿದೆ ಎಂದು ಗ್ರಾಮ ಸ್ಥರಾದ ಕೃಪಾಶಂಕರ್, ದಿನೇಶ್, ಬಾಲು, ವಿಕಾಸ್, ಮಧು, ಪುನೀತ್, ನಾಗರಾಜು ಆರೋಪಿಸಿದರು.
`ಬಹಳ ವರ್ಷಗಳ ನಂತರ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುತ್ತಿರುವುದು ಈ ಭಾಗದ ಜನರಿಗೆ ಖುಷಿ ನೀಡಿದೆ. ಆದರೆ ಕಳಪೆ ಕಾಮಗಾರಿ ಸಹಿಸಲು ಆಗುತ್ತಿಲ್ಲ. ನಿಯಮ ಉಲ್ಲಂಘಿಸಿ ರಜೆಯ ದಿನವಾದ ಭಾನುವಾರವೂ ಕೆಲಸ ಮಾಡಲಾಗುತ್ತಿದೆ. ಎಂಜಿನಿಯರ್ ಗಮನಕ್ಕೆ ಈ ವಿಷಯ ತಂದರೆ ಅವರು ಸರಿಯಾದ ಉತ್ತರ ನೀಡದೆ ಜಾರಿ ಕೊಳ್ಳುತ್ತಾರೆ~ ಎಂದು ಗ್ರಾಮಸ್ಥರು ದೂರಿದರು.
`ಈಗ ಹಾಕಿರುವ ಕಾಂಕ್ರೀಟ್ ಕಿತ್ತು ಹಾಕಿ ಹೊಸದಾಗಿ ಕಾಮಗಾರಿ ನಡೆಸ ಬೇಕು. ಗುಣಮಟ್ಟಕ್ಕೆ ಒತ್ತು ನೀಡ ಬೇಕು. ಇಲ್ಲವಾದರೆ ಕೆಲಸ ನಡೆಸಲು ಬಿಡುವುದಿಲ್ಲ~ ಎಂದು ಎಚ್ಚರಿಕೆ ನೀಡಿದರು.