ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಚಾರಕ್ಕೆ ತರಬೇತಿ: ಸುಧಾರಿಸದ ಸಾಕ್ಷರತೆ

Last Updated 27 ಸೆಪ್ಟೆಂಬರ್ 2011, 9:10 IST
ಅಕ್ಷರ ಗಾತ್ರ

ದೇವದುರ್ಗ: `ಸಾಕ್ಷರತಾ ಭಾರತ ಯೋಜನೆ~ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನಕ್ಷರಸ್ಥ ಮಹಿಳೆರಿಗಾಗಿ ವಸತಿ ಸಹಿತ ಒಂದು ತಿಂಗಳ ಕಾಲ ನಡೆದಿರುವ ಜಿಲ್ಲಾ ಮಟ್ಟದ ಸಾಕ್ಷರತಾ ತರಬೇತಿ ಕೇವಲ ಕಾಟಾಚಾರಕ್ಕೆ ಎನ್ನುವಂತೆ ಕಂಡು ಬಂದಿದೆ. ಲೋಕ ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘನೆ ಮತ್ತು ಅವ್ಯವಸ್ಥೆಯಿಂದ ತರಬೇತಿದಾರರು ವಾಪಸ್ ಹೋದ ಘಟನೆ ನಡೆದಿದೆ.

ತಾಲ್ಲೂಕಿನ ಕೆ. ಇರಬಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಾನಸಗಲ್ ರಂಗನಾಥ ದೇವಸ್ಥಾನದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ರಾಜ್ಯ ಸಂಪನ್ಮೂಲ ಕೇಂದ್ರ ಮೈಸೂರು, ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ, ಮಹಿಳಾ ಸಾಮಖ್ಯಾ ಜಿಲ್ಲಾ ಘಟಕ, ಜನ ಶಿಕ್ಷಣ ಸಂಸ್ಥಾನ ರಾಯಚೂರು ಮತ್ತು ಲೋಕ ಶಿಕ್ಷಣ ಸಮಿತಿ ಗ್ರಾಪಂ ಕೆ. ಇರಬಗೇರಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನಕ್ಷರಸ್ಥ ಮಹಿಳೆಯರಿಗೆ ಕಂಪ್ಯೂಟರ್ ಮೂಲಕ ಸಾಕ್ಷರತೆ ಮತ್ತು ವೃತ್ತಿ ಕೌಶಲ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸೆ. 2ರಂದು ಕಾರ್ಯಕ್ರಮ ಆರಂಭವಾಗಿದ್ದು, ಆ. 1ರಂದು ಮುಕ್ತಾಯಗೊಳ್ಳುತ್ತದೆ. ಈ ಒಂದು ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಮುಖ್ಯಸ್ಥರಾಗ್ದ್ದಿದು, ತಾಪಂ ಇಒ ಅವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಕಾರ್ಯಕ್ರಮಕ್ಕೆ ತಗಲುವ ಖರ್ಚನ್ನು ತಾಪಂ ಇಒ ಅವರೇ ಬಿಡುಗಡೆ ಮಾಡುವ ಅಧಿಕಾರ ಹೊಂದಿರುತ್ತಾರೆ.

ಉಲ್ಲಂಘನೆ: ಇಲಾಖೆಯ ನಿಯಮ ಪ್ರಕಾರ ಶಾಲೆಯನ್ನು ಕಲಿಯದೆ ಇರುವ 15 ವರ್ಷ ಮೇಲ್ಪಟ್ಟ 50 ಜನ ಅನಕ್ಷರಸ್ಥ ಮಹಿಳೆಯರನ್ನು ಸ್ಥಳೀಯ ಪ್ರೇರಕರ ಮೂಲಕ ಗುರುತಿಸಿ ಆಯ್ಕೆ ಮಾಡಬೇಕಾಗಿದ್ದರೂ ನಿಯಮವನ್ನು ಉಲ್ಲಂಘಿ ಸಿರುವುದು ಕಂಡು ಬಂದಿದೆ.

ಸುಮಾರು ಅರ್ಧಕ್ಕಿಂತ ಹೆಚ್ಚು 10ರಿಂದ 12 ವರ್ಷದ ಬಾಲಕಿಯರನ್ನು ಈ ತರಬೇತಿಗೆ ಕರೆತರಲಾಗಿದೆ. ಇದರಲ್ಲಿ ಕೆಲವು ಬಾಲಕಿಯರು ಐದನೇ ತರಗತಿವರೆಗೂ ಶಾಲೆ ಕಲಿತಿರುವುದು ಕಂಡು ಬಂದಿದೆ.

ತರಬೇತಿಯಲ್ಲಿ ಕನಿಷ್ಠ 50 ಜನ ಮಹಿಳೆಯರು ಇರಬೇಕಾಗಿದ್ದರೂ 30ರ ಸಂಖ್ಯೆ ದಾಟಿಲ್ಲ. ಒಂದು ಕಡೆ ಸಾಕ್ಷರತೆ ಹೆಸರಿನಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅನಕ್ಷಸ್ಥರಿಗೆ ಅಕ್ಷರ ಕಲಿಸಿಕೊಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಹೇಳಿಕೊಂಡರೆ ಇಲ್ಲಿ ಮಾತ್ರ ಯಾರು ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಟಾಚಾರ: ಹೆಸರಿಗೆ ಮಾತ್ರ ಜಿಲ್ಲಾ ಮಟ್ಟದ ತರಬೇತಿ ಎನಿಸಿಕೊಂಡರೂ ತರಬೇತಿ ನಡೆಯುವ ಪಕ್ಕದ ಹಳ್ಳಿಗೆ ಸುದ್ದಿ ಗೊತ್ತಿಲ್ಲ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 50 ಜನ ಅನಕ್ಷರಸ್ಥ ಮಹಿಳೆಯರ ಆಯ್ಕೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದುಕಾಣುತ್ತಿದೆ. ಕಂಪೂಟರ್ ಮೂಲಕ ಸಾಕ್ಷರತೆ ಎಂದು ಹೇಳಿ ತರಬೇತಿ ಆರಂಭಿಸಿದರೂ ಅದಕ್ಕೆ ತಕ್ಕಂತೆ ಕಲಿಸವರು ಇಲ್ಲ. ವೃತ್ತಿ ಕೌಶಲ್ಯ ಕುರಿತು ತರಬೇತಿ ನೀಡುವ ಅರ್ಹತೆ ಇರುವವರ ಕೊರತೆ ಹಾಗೂ ದಿನಪೂರ್ತಿ ತರಬೇತಿದಾರರ ಜತೆಯಲ್ಲಿ ಇದ್ದು ಅಕ್ಷರ ಜ್ಞಾನ ನೀಡಬೇಕಾದವರು ಗೈರು ಹಾಜರಾದರೂ ಕೇಳವರು ಇಲ್ಲದಂತಾಗಿದೆ.

ವಾಪಸ್: ಈ ಎಲ್ಲ ಅವ್ಯವಸ್ಥೆಯಿಂದಾಗಿ ಅರ್ಧದಷ್ಟು ಮಹಿಳೆಯರು ತರಬೇತಿ ಬಿಟ್ಟು ಹೋಗಿರುವುದು ಹಾಜರಾತಿ ಪುಸ್ತಕದಿಂದ ಕಂಡು ಬಂದಿದೆ.

ಅವ್ಯವಸ್ಥೆ: ಒಂದು ತಿಂಗಳ ವಸತಿ ಸಹಿತ ಸಾಕ್ಷರತಾ ತರಬೇತಿಗೆ ಹಾಜರಾಗಿರುವ ಮಹಿಳೆಯರಿಗೆ ಶೌಚಾಲಯ ಮತ್ತು ಸ್ನಾನಕ್ಕೆ ವ್ಯವಸ್ಥೆ ಇಲ್ಲದ ಕಾರಣ ಬಯಲು ಶೌಚಾಲಯವೇ ಗತಿಯಾಗಿದೆ. ಇಂತಿಷ್ಟು ಹಣದಲ್ಲಿ ಒಳ್ಳೆಯ ಊಟ ನೀಡಲು ನಿಯಮ ಇದ್ದರೂ ಕಳಪೆ ಊಟ ನೀಡಿರುವುದು ಮತ್ತು ಬರೆಯಲು ನೋಟ್‌ಬುಕ್, ಪೆನ್ನು ನೀಡದೆ ಇರುವುದು ಕಂಡು ಬಂದಿದೆ.

ದುರದೃಷ್ಟ: ಈ ಮೊದಲೇ ದೇವದುರ್ಗ ತಾಲ್ಲೂಕು ಸಾಕ್ಷರತೆ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿ ಇದೆ. ಅದರಲ್ಲಿ ಮಹಿಳೆಯರ ಸಾಕ್ಷರತೆ ತೀರ ಕಡಿಮೆ ಇದೆ.

ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕಾಗಿಯೇ ಕಳೆದ ಎರಡು ದಶಕಗಳಿಂದ ಸತತವಾಗಿ ತಾಲ್ಲೂಕಿಗೆ ಹರಿದು ಬರುತ್ತಿರುವ ಹಣ ವ್ಯವಸ್ಥಿತವಾಗಿ ಖರ್ಚು ಬಿಳುತ್ತಿದ್ದರೂ ಸಾಕ್ಷರತಾ ಪ್ರಮಾಣದಲ್ಲಿ ಮಾತ್ರ ಗಣನೀಯವಾಗಿ ಹೆಚ್ಚಳ ಕಾಣದೆ ಇರುವುದು ದುರದೃಷ್ಟ ಎನ್ನುವಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT