ಬನಹಟ್ಟಿ: ಉತ್ತರ ಕರ್ನಾಟಕದ ಕೆಲವೇ ಕೆಲವು ಪುರಾತನ ರಥಗಳಲ್ಲಿ ಬನಹಟ್ಟಿಯ ಕಾಡಸಿದ್ಧೇಶ್ವರರ ರಥವೂ ಒಂದು.
ಈ ರಥ ಸುಮಾರು 150 ವರ್ಷಗಳಷ್ಟು ಇತಿಹಾಸವನ್ನು ಹೊಂದಿದೆ. ಜಾತ್ರೆಯ ಸಂದರ್ಭದಲ್ಲಿ ಈ ರಥವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಸುಂದರ ಹೂವಿನ ಮಾಲೆಗಳಿಂದ, ಬಣ್ಣ ಬಣ್ಣದ ದೀಪಗಳಿಂದ ಮತ್ತು ಕಂಠಮಾಲೆಗಳಿಂದ ಶೃಂಗಾರಗೊಂಡ ರಥವನ್ನು ಭಕ್ತಾದಿಗಳು ಎಳೆದುಕೊಂಡು ಬರುವಾಗ ರೋಮಾಂಚನವಾಗುತ್ತದೆ. ಅಷ್ಟು ಅದ್ಭುತವಾದ ರಥ ಇದಾಗಿದೆ.
ಇದೇ 24 ರಂದು ಕಾಡಸಿದ್ಧೇಶ್ವರರ ಜಾತ್ರೆ ನಡೆಯಲಿದ್ದು ರಥದಲ್ಲಿ ಕಾಡಸಿದ್ಧೇಶ್ವರರ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವ ನೆರವೇರಿಸಲಾಗುವುದು.
ಅಂದಾಜು 150 ವರ್ಷಗಳಷ್ಟು ಹಳೆಯ ರಥ ಇದು. ಸ್ಥಳೀಯ ಕಾಡಸಿದ್ಧೇಶ್ವರ ಜಾತ್ರೆಯು ನೂರಾರು ವರ್ಷಗಳಿಂದ ನಡೆದು ಬರುತ್ತಿದ್ದು, ಅದಕ್ಕಾಗಿ ರಥದ ಕೊರತೆಯನ್ನು ಎದುರಿಸುತ್ತಿದ್ದರು. ಇಲ್ಲಿಯ ಜನರು ರಥದ ವಿಷಯವನ್ನು ಕುರಿತು ಅಂದಿನ ಜಮಖಂಡಿ ಸಂಸ್ಥಾನದ ಸಂಸ್ಥಾನಿಕರ ಹತ್ತಿರ ಪ್ರಸ್ತಾಪ ಮಾಡಿದರು.
ಇದನ್ನು ಪರಿಗಣಿಸಿದ ಅಂದಿನ ಮಹಾರಾಜ ಪರಶುರಾಮಭಾವು ಶಂಕರರಾವ ಪಟವರ್ಧನ ಸರ್ಕಾರ ಅವರು ತಮ್ಮ ರಾಜವಾಡೆಯ ವಸ್ತು ಸಂಗ್ರಹಾಲಯದಲ್ಲಿದ್ದ ಬಹು ಮುಖ್ಯವಾದ ವಸ್ತುಗಳಲ್ಲಿ ಒಂದಾದ ಅಂದಾಜು 80 ವರ್ಷಗಳಷ್ಟು ಹಳೆಯದಾದ ಮತ್ತು ಸೀಸಂ ಕಟ್ಟಿಗೆಯಿಂದ ಮಾಡಲಾದ ರಥವನ್ನು ಸ್ಥಳೀಯ ಮಂಗಳವಾರ ಪೇಟೆಯ ದೈವ ಮಂಡಳಿಗೆ 1949ರ ಆಗಸ್ಟ್ 23ರಂದು ನೀಡಿದ್ದರು. ಈ ವಿಷಯ ಅಂದು ಪ್ರಕಟಗೊಳ್ಳುತ್ತಿದ್ದ ನವಯುಗ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂದು ಈ ರಥ ಬನಹಟ್ಟಿಗೆ ಬಂದು 64 ವರ್ಷಗಳಾಗಿವೆ.
1949ರಲ್ಲಿ ಈ ರಥವನ್ನು ಅಂದಿನ ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷರಾಗಿದ್ದ ಚ.ಚ. ಅಬಕಾರ ಅವರು ಮಹಾರಾಜರಿಗೆ ‘ನಾವು ರಥವನ್ನು ಕೇವಲ ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ನಡೆಯುವ ರಥೋತ್ಸವದ ಸಲುವಾಗಿ ಬಳಸುತ್ತೇವೆ’ ಎಂದು ಬರೆದುಕೊಟ್ಟು ರಥವನ್ನು ಪಡೆದುಕೊಂಡು ಬಂದಿದ್ದರು.
ಈ ಎಲ್ಲ ಸಂಗತಿಗಳನ್ನು ಹೇಳುವ ತಾಮ್ರಪತ್ರ ಇನ್ನೂ ಬನಹಟ್ಟಿಯ ಮಂಗಳವಾರ ಪೇಟೆಯ ದೈವ ಮಂಡಳಿಯವರ ಹತ್ತಿರ ನೋಡಲು ಸಿಗುತ್ತದೆ. ಇದು ಮೋಡಿ ಲಿಪಿಯಲ್ಲಿದೆ. ಇದನ್ನು ಇತ್ತೀಚೆಗೆ ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಇದು ಐತಿಹಾಸಿಕ ತಾಮ್ರಪತ್ರ. ಇದರಲ್ಲಿ ರೆವಿನ್ಯೂ ಆಫೀಸ್ರ ಜಮಖಂಡಿ ಸ್ಟೇಟ್ ಎಂದು ಬರೆಯಲಾಗಿದೆ.
ಒಟ್ಟಿನಲ್ಲಿ ಬನಹಟ್ಟಿಯ ಕಾಡಸಿದ್ಧೇಶ್ವರರ ಜಾತ್ರೆ ಹಲವಾರು ಐತಿಹಾಸಿಕ ಘಟನೆಗಳ ಸಂಗಮ.
ಪಟಾಕಿ ಜಾತ್ರೆ!
ಪಟಾಕಿ ಜಾತ್ರೆ ಎಂದೇ ಕರೆಯಲ್ಪಡುವ ಈ ಜಾತ್ರೆ ಯನು್ನನೋಡಿಯೇ ಸಂಭ್ರಮಿಸಬೇಕು. ಕಷ್ಟ ಪರಿಹಾರವಾದರೆ ಮದ್ದು ಸುಡುವೆವು ಎಂದು ಭಕ್ತರು ಹರಕೆ ಹೊರುತ್ತಾರೆ. ಲಕ್ಷಗಟ್ಟಲೆ ಬೆಲೆ ಬಾಳುವ ಪಟಾಕಿಗಳ ಮೈ ನಡುಗಿಸುವ ಸದ್ದಿನ ಮಧ್ಯೆ ಕುಣಿದು ಕುಪ್ಪಳಿಸಿ ಮೈಮರೆಯುವ ರೀತಿ ನೋಡುವಂತಿರುತ್ತದೆ. ಪಟಾಕಿ ಸುಟ್ಟ ಮೇಲೆ ಶಂಕರಪ್ರಿಯ ಚನ್ನಕದಂಬಲಿಂಗ ಎಂಬ ಅಂಕಿತನಾಮದಿಂದ ಪ್ರಸಿದ್ಧರಾದ ಕಾಡಸಿದ್ಧೇಶ್ವರರಿಗೆ ಊರ ಹಿರಿಯರಿಂದ ಪೂಜೆಸಲು್ಲತ್ತದೆ. ನಂತರ ರಥೋತ್ಸವಕೆ್ಕ ಚಾಲನೆ ದೊರೆಯುತ್ತದೆ.
ಬನಹಟ್ಟಿಯ ಹೂಗಾರ ಹಾಗೂ ರಬಕವಿಯ ನಾಗರಾಳ ಮನೆತನದ ಕಲಾವಿದರ ಅದ್ಭುತ ಕರಡಿ ಮಜಲು,ಡೊಳ್ಳು ಕುಣಿತ, ಜತೆಗೆ ನಂದಿಕೋಲುಗಳನು್ನ ಮುಂದಿಟ್ಟುಕೊಂಡು ಸಕಲ ಮಂಗಲ ವಾದ್ಯಗಳೊಂದಿಗೆ, ಜೈಕಾರಗಳ ನಡುವೆ ರಥ ಸಾಗುತ್ತದೆ.
– ಜೆ.ಯು. ಮೊಹಮ್ಮದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.