ಮೂಡಿಗೆರೆ: ತಾಲ್ಲೂಕಿನಾದ್ಯಂತ ಆನೆ ಹಾವಳಿ ಮುಂದುವರೆದಿದ್ದು, ಕಾಫಿ ತೋಟ, ಗದ್ದೆ, ಏಲಕ್ಕಿ ಬೆಳೆಯನ್ನು ನೆಲಸಮ ಮಾಡಿದ್ದು, ಪಟ್ಟಣ ಪಂಚಾಯತಿಯ ಘನತ್ಯಾಜ್ಯ ನಿರ್ವಹಣೆಯ ಘಟಕದ ತಡೆಗೋಡೆ ಕೆಡವಿ ಸುಮಾರು ಮೂರು ಲಕ್ಷದಷ್ಟು ಹಾನಿ ಮಾಡಿವೆ.
ನಾಲ್ಕು ತಿಂಗಳ ಹಿಂದೆ ಪಟ್ಟಣದ ಡಿಎಸ್ಬಿಜಿ ಕಾಲೇಜಿನ ತಡೆಗೋಡೆಯನ್ನು ಆನೆಗಳ ಹಿಂಡು ಕೆಡವಿ ಹಾಕಿದ್ದವು. ಪಟ್ಟಣದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ನಂದೀಪುರದಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕವಿದ್ದು, ಸೋಮವಾರ ರಾತ್ರಿ ದಾಳಿ ಮಾಡಿರುವ ಕಾಡಾನೆಗಳು ತಡೆಗೋಡೆಯನ್ನು ನೆಲಕ್ಕುರುಳಿಸಿವೆ.
ತಡೆಗೋಡೆಯನ್ನು ಸಿಮೆಂಟ್ ಇಟ್ಟಿಗೆಯಿಂದ ಕಟ್ಟಲಾಗಿದ್ದು, ಸುಮಾರು 175 ಮೀಟರಿನಷ್ಟು ದೂರದ ತಡೆಗೋಡೆಯನ್ನು ಕೆಡವಿ ಹಾಕಿವೆ. ಸುದ್ದಿ ತಿಳಿಯುತಿದ್ದಂತೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಲತಾಲಕ್ಷ್ಮಣ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ.ವಿ. ಗಣೇಶ್, ಕಿರಿಯ ಎಂಜಿನಿಯರ್ ಜಯಸಿಂಗ್ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.