ಗುಂಡ್ಲುಪೇಟೆ : ತಾಲ್ಲೂಕಿನ ಕುರುಬರಹುಂಡಿ ಗ್ರಾಮದ ರೈತ ಕೆ.ಪಿ. ಶಿವರಾಜು ಅವರ ಜಮೀನಿಗೆ ಕಾಡಾನೆಗಳ ಹಿಂಡು ಗುರುವಾರ ರಾತ್ರಿ ದಾಳಿ ನಡೆಸಿ ಕಬ್ಬು, ತೆಂಗಿನಮರ ಹಾಗೂ ತೊಗರಿ ಬೆಳೆಯನ್ನು ನಾಶ ಪಡಿಸಿವೆ.
ರೈತ ಕೆ.ಪಿ. ರಾಜು ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿನ ಬೆಳೆ, ತೆಂಗಿನ ಮರಗಳು, ತೊಗರಿ ಬೆಳೆಯನ್ನು ಕಾಡಾನೆಗಳ ಹಿಂಡು ನಾಶ ಪಡಿಸಿವೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿನಿತ್ಯ ಸಂಜೆ ವೇಳೆ ಕಾಡಾನೆಗಳು ಬಂದು ರೈತರು ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿನ್ನುತ್ತಿವೆ. ಹಲವು ವೇಳೆ ರೈತರ ಮೇಲೆಯೇ ದಾಳಿ ನಡೆಸಿ ಗಾಯಗೊಳಿಸಿದೆ. ಮತ್ತೆ ಕೆಲವರು ಅಸುನೀಗಿದ್ದಾರೆ. ರೈತರಿಗೆ ಆಗಿರುವ ನಷ್ಟಕ್ಕೆ ಅರಣ್ಯ ಇಲಾಖೆ ವತಿಯಿಂದ ಶೀಘ್ರವಾಗಿ ಪರಿಹಾರ ಕೊಡಿಸ ಬೇಕೆಂದು ಆಗ್ರಹಿಸಿದ್ದಾರೆ.