ನವದೆಹಲಿ (ಪಿಟಿಐ): ‘ನಮ್ಮ ಕಣ್ಣೀರು ಬತ್ತಿಲ್ಲ. ಪ್ರತಿದಿನವೂ ಅವಳ ನೆನಪು ಕಾಡುತ್ತದೆ. ನಿತ್ಯವೂ ಮನೆಯಲ್ಲಿ ಯಾರಾದರೂ ಒಬ್ಬರು ಆ ಕರಾಳ ದಿನವನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಾರೆ’
ಕಳೆದ ಡಿಸೆಂಬರ್ 16ರಂದು ದೆಹಲಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ನಲುಗಿ, ಸಾವು–ಬದುಕಿನ ಮಧ್ಯೆ ಹೋರಾಡಿ ಕೊನೆಗೆ ಡಿಸೆಂಬರ್ 29ರಂದು ಕಣ್ಣುಮುಚ್ಚಿದ ಮುದ್ದಿನ ಮಗಳನ್ನು ನೆನೆದು ಸಂಕಟ ಪಡುವ ತಂದೆಯ ನೋವಿನ ನುಡಿಗಳಿವು.
ಇಡೀ ದೇಶವನ್ನು ಬೆಚ್ಚಿಬೀಳಿಸಿದ, ಈ ಪ್ರಕರಣಕ್ಕೆ ಈಗ ಒಂದು ವರ್ಷ. ಒಂಬತ್ತು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ನಾಲ್ವರಿಗೆ ಮರಣ ದಂಡನೆ ವಿಧಿಸಿತ್ತು.
‘ನಮಗೆ ಈ ನೋವಿನಿಂದ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆಕೆಯ ನೆನಪು ಕ್ಷಣಕ್ಷಣಕ್ಕೂ ಕಾಡುತ್ತದೆ’ ಎಂದು ಹೇಳುವಾಗ ತಂದೆಯ ಕಣ್ಣಾಲಿಗಳು ಮಂಜಾದವು.
‘ಅಡುಗೆ ಮಾಡುವಾಗ, ಮನೆಯವರೆಲ್ಲ ಒಟ್ಟಿಗೆ ಕೂತು ಉಣ್ಣುವಾಗ ನನ್ನ ಪತ್ನಿಗೆ ಮಗಳ ನೆನಪು ಇನ್ನಿಲ್ಲದಂತೆ ಕಾಡುತ್ತದೆ. ಇದು ಆಕೆಗೆ ಇಷ್ಟವಾದ ಅಡುಗೆ, ಆದರೆ ನಾವು ಅವಳಿಲ್ಲದೆಯೇ ಊಟ ಮಾಡುತ್ತಿದ್ದೇವೆ ಎಂದು ಹೇಳುತ್ತ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾಳೆ. ನಿಜ, ನಮ್ಮ ಮಗಳಿಗೆ ರುಚಿರುಚಿಯಾದ ಅಡುಗೆ ಎಂದರೆ ಪಂಚಪ್ರಾಣವಾಗಿತ್ತು’.
‘ನಮ್ಮ ನಿಜವಾದ ಹೋರಾಟ ಈಗ ಆರಂಭವಾಗಿದೆ. ಈ ಪ್ರಕರಣದಲ್ಲಿ ಬಾಲ ಅಪರಾಧಿಗೆ ಗಲ್ಲು ಶಿಕ್ಷೆ ಆಗಿಲ್ಲ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ. ನನ್ನ ಮಗಳ ಸಾವಿಗೆ ಕಾರಣರಾದ ಎಲ್ಲರನ್ನೂ ನೇಣಿಗೇರಿಸಬೇಕು. ಆಗ ಮಾತ್ರ ನಾವು ನೆಮ್ಮದಿಯಿಂದ ನಿದ್ರೆ ಮಾಡುವಂತಾಗುತ್ತದೆ’–ಯುವತಿಯ ತಂದೆಯ ಈ ಮಾತಿಗೆ ತಾಯಿ ಕೂಡ ದನಿಗೂಡಿಸುತ್ತಾರೆ.
‘ಪ್ರತಿದಿನವೂ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಸಮಾಜದ ಮನಃಸ್ಥಿತಿ ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರು ಸುರಕ್ಷಿತವಾಗಿ ಓಡಾಡಲು ಸಾಧ್ಯವಿಲ್ಲ’ ಎಂದೂ ಅವರು ನುಡಿಯುತ್ತಾರೆ.
ಅತ್ಯಾಚಾರ ಪ್ರಕರಣ ದುಪ್ಪಟ್ಟು: ದೆಹಲಿ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ದೇಶದಲ್ಲಿ ಇಂಥ ದುಪ್ಪಟ್ಟು ಪ್ರಕರಣಗಳು ವರದಿಯಾಗಿದೆ. ಇನ್ನು ಲೈಂಗಿಕ ಕಿರುಕುಳ ಪ್ರಕರಣಗಳು ಆರು ಪಟ್ಟು ಹೆಚ್ಚಿವೆ. ಕಾನೂನು ಕ್ರಮಗಳ ಕುರಿತು ಮಹಿಳೆಯರಲ್ಲಿ ಅರಿವು ಮೂಡಿರುವುದರಿಂದಲೇ ಇಷ್ಟೊಂದು ಸಂಖ್ಯೆಯಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ.
ಕಳೆದ 13 ವರ್ಷಗಳಲ್ಲೇ ಈ ಬಾರಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ರಾಜಧಾನಿಯಲ್ಲಿ ನವೆಂಬರ್ 30ರವರೆಗೆ 1,493 ಪ್ರಕರಣಗಳು ಹಾಗೂ 3,237 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ.
ಮಹಿಳಾ ಸಹಾಯವಾಣಿ: ಮಹಿಳೆಯರ ಸುರಕ್ಷೆಯ ದೃಷ್ಟಿಯಿಂದ ದೆಹಲಿ ಪೊಲೀಸರು ಮಹಿಳಾ ಸಹಾಯವಾಣಿ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಬದಲಾವಣೆ ಎಲ್ಲಿದೆ?
‘ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷೆಯ ನಿಟ್ಟಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎನ್ನುವ ಆರೋಪ ಕೂಡ ಕೇಳಿಬಂದಿದೆ.
ಮಹಿಳಾ ಸಹಾಯವಾಣಿ ಸೇರಿದಂತೆ ಹಲವಾರು ಕ್ರಮಗಳನ್ನು ದೆಹಲಿ ಸರ್ಕಾರ ತೆಗೆದುಕೊಂಡಿದೆ. ಆದರೆ ಬಸ್ ಹಾಗೂ ಆಟೊಗಳಲ್ಲಿ ಜಿಪಿಎಸ್ ಅಳವಡಿಕೆ, ಮಹಿಳೆಯರಿಗಾಗಿ ವಿಶೇಷ ಆಟೊಗಳು ಇತ್ಯಾದಿ ಭರವಸೆಗಳು ಇನ್ನೂ ಇಡೇರಿಲ್ಲ.
‘ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಆತಂಕ ಉಂಟಾಗುತ್ತದೆ. ನಮ್ಮ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುವುದನ್ನು ಈಗಲೂ ಕಾಣಲು ಸಾಧ್ಯವಿಲ್ಲ’ ಎಂದು ಹೇಳುತ್ತಾರೆ ಭಾವನಾ ಟುಟೆಜಾ.
‘ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿದರೆ ಸಾಲದು. ಮಹಿಳೆಯರ ಸುರಕ್ಷೆಯ ಬಗ್ಗೆ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು’ ಎನ್ನುವುದು ಮಹಿಳಾ ಪರ ಹೋರಾಟಗಾರ್ತಿ ಕವಿತಾ ಕೃಷ್ಣನ್ ಅವರ ಆಗ್ರಹ.
ಜಾಗತಿಕ ವಿಷಯ: ‘ಮಹಿಳೆಯರ ಸುರಕ್ಷೆ ಎನ್ನುವುದು ಜಾಗತಿಕ ವಿಷಯವಾಗಿದೆ’ ಎಂದು ಜರ್ಮನಿ ರಾಯಭಾರಿ ಮೈಕೆಲ್್ ಸ್ಟೈನರ್್ ಹೇಳಿದ್ದಾರೆ. ‘ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹೋರಾಡುತ್ತಿರುವವರಿಗೆ ನನ್ನ ಬೆಂಬಲವಿದೆ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.