ಚಿಕ್ಕನಾಯಕನಳ್ಳಿ: ಗೋಮಾಳ ಉಳಿಸಿ ಎಂದು ಆಗ್ರಹಿಸಿ ಕಾಡೇನಹಳ್ಳಿ ಗ್ರಾಮಸ್ಥರು, ರೈತ ಮುಖಂಡರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಮುಖಂಡ ಮಲ್ಲಣ್ಣ ಮಾತನಾಡಿ, ಪುರಸಭೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡೇನಹಳ್ಳಿ ಗ್ರಾಮದ ಸರ್ವೆ ನಂ.31ರಲ್ಲಿ ಬರುವ 5.3 ಎಕರೆ ಗೋಮಾಳವನ್ನು ಕೆಎಸ್ಆರ್ಟಿ ಡಿಪೊ ನಿರ್ಮಾಣಕ್ಕಾಗಿ ಪುರಸಭೆ ಗುರುತಿಸಿದೆ. ಈ ಜಮೀನನ್ನು ಪುರಸಭೆ ವಶಕ್ಕೆ ನೀಡಬೇಕು ಎಂದು ಸದಸ್ಯರ ನಿಯೋಗ ಶಾಸಕರ ಸಮ್ಮುಖದಲ್ಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಗ್ರಾಮಸ್ಥರಿಗೆ ಆಘಾತ ಉಂಟುಮಾಡಿದೆ ಎಂದರು.
ರೈತ ಮುಖಂಡ ಗಂಗಾಧರಪ್ಪ ಮಾತನಾಡಿ ನಮ್ಮದು ಕೃಷಿ ಬದುಕು. ದನ ಕರುಗಳಿಗೆ ಗೋಮಾಳ ಬೇಕು. ಇದರ ಜತೆ ಗ್ರಾಮದ ಮಧ್ಯದಲ್ಲಿರುವ ಹೆದ್ದಾರಿ ವಿಸ್ತರಣೆಯಾದರೆ ಮನೆ ಕಳೆದುಕೊಂಡವರು ಎಲ್ಲಿಗೆ ಹೋಗಬೇಕು ಎಂಬುದೇ ತೋಚದಂತಾಗುತ್ತದೆ. ಗೋಮಾಳ ಉಳಿದರೆ ಇಲ್ಲಾದರೂ ಮನೆ ಕಟ್ಟಿಕೊಳ್ಳಬಹುದು ಎಂದರು.
ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಗೋಮಾಳ ಕಬಳಿಸುತ್ತಿರುವ ಪುರಸಭೆ ಆಡಳಿತದ ವಿರುದ್ಧ ಹಾಗೂ ಇದಕ್ಕೆ ಮೌನ ಸಮ್ಮತಿ ಸೂಚಿಸಿರುವ ಶಾಸಕರ ವಿರುದ್ಧ ಕಿಡಿಕಾರಿದರು.
ಹೊನ್ನೆಬಾಗಿ ಗ್ರಾ.ಪಂ. ಅಧ್ಯಕ್ಷ ಗುರುಮೂರ್ತಿ, ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಕಂಟಲಗೆರೆ ಸತೀಶ್, ತಿಮ್ಲಾಪುರ ಶಂಕರಣ್ಣ, ಬರಗೂರು ನಂಜುಂಡಯ್ಯ, ಲೋಕಣ್ಣ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.