ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಅಧ್ಯಯನ ಬೇಡ ಹಿಂಜರಿಕೆ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದೊಂದು ಕಾಲ ಇತ್ತು. ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ ಎಂದರೆ ಬೇರೆ ಯಾವುದೇ ಕಾಲೇಜಿನಲ್ಲಿ ಅಡ್ಮಿಷನ್ ಸಿಕ್ಕಿಲ್ಲ ಅಥವಾ ಓದು ಮುಗಿದರೂ ಕೆಲಸ ಸಿಕ್ಕಿಲ್ಲ ಎಂದೇ ಅರ್ಥೈಸಲಾಗುತ್ತಿತ್ತು. ಕಾನೂನು ಶಿಕ್ಷಣ ಹಾಗೂ ಕಾನೂನು ಕ್ಷೇತ್ರದ ಬಗ್ಗೆ ಇರುವ ತಪ್ಪು ತಿಳಿವಳಿಕೆ ಇಂತಹ ಭಾವನೆಗೆ ಕಾರಣವಾಗಿತ್ತು. ಹಾಗೆಯೇ ಹೊಸಬರು ಈ ಕ್ಷೇತ್ರಕ್ಕೆ ಕಾಲಿಡಲು ಹಿಂಜರಿಯುತ್ತಿದ್ದರು.

ಯಾವುದೋ ಕೌಟುಂಬಿಕ ಉದ್ಯಮದಂತೆ ಅಪ್ಪ, ತಾತ ವಕೀಲರಾಗಿದ್ದರೆ ಮಾತ್ರ ಮಕ್ಕಳು ಕಪ್ಪು ಕೋಟು ಧರಿಸುತ್ತಿದ್ದರು. ಆದರೆ ಜಾಗತೀಕರಣದ ಗಾಳಿ ಈಗ ಕಾನೂನು ಕ್ಷೇತ್ರದಲ್ಲೂ ಬೀಸುತ್ತಿದೆ. ಕಾನೂನು ಅಧ್ಯಯನ ಸಾಕಷ್ಟು ಉದ್ಯೋಗಾವ­ಕಾಶಗಳನ್ನು ಕಲ್ಪಿಸುತ್ತಿದೆ. ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸೆಡ್ಡು ಹೊಡೆಯುವಂತೆ ಯಶಸ್ವಿ ವಕೀಲರು ಐದಂಕಿ, ಆರಂಕಿ ಸಂಬಳ ಎಣಿಸುತ್ತಿದ್ದಾರೆ. ಹೀಗಿದ್ದರೂ ಮೇಧಾವಿ ವಿದ್ಯಾರ್ಥಿಗಳು ಬಿ.ಇ. ಅಥವಾ ಎಂ.ಬಿ.ಬಿ.ಎಸ್.ನತ್ತ ಮುಖ ಮಾಡುತ್ತಾರೆಯೇ ಹೊರತು ವಕೀಲಿ ವೃತ್ತಿಗೆ ಕಾಲಿಡಲು ಅಳುಕುತ್ತಾರೆ.

ಕಾನೂನು ಪದವಿ ಪಡೆದಾಕ್ಷಣ ನೀವು ಕಪ್ಪುಕೋಟು ಧರಿಸಿ ನ್ಯಾಯಾಲಯದಲ್ಲಿ ವಾದಿಸಲೇಬೇಕಿಲ್ಲ. ನಾಗರಿಕ ಕಾನೂನು (ಸಿವಿಲ್ ಲಾ), ಅಪರಾಧ ಕಾನೂನು, ಅಂತರ ರಾಷ್ಟ್ರೀಯ ಕಾನೂನು, ಕಾರ್ಮಿಕ ಕಾನೂನು, ತೆರಿಗೆಗೆ ಸಂಬಂಧಿಸಿದ ಕಾನೂನು, ಬೌದ್ಧಿಕ ಆಸ್ತಿ ಹಕ್ಕು ಕಾನೂನು (ಪೇಟೆಂಟ್ ಲಾ) ಹೀಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಪರಿಣತಿ ಪಡೆದು ಸಲಹೆಗಾರರಾಗಬಹುದು.

ಕಾರ್ಪೊರೇಟ್ ಕಚೇರಿಗಳು, ದೊಡ್ಡ ಉದ್ಯಮಿಗಳು, ಸರ್ಕಾರದ ಪ್ರಾಧಿಕಾರಗಳು ಹಾಗೂ ಮಂಡಳಿಗಳು ಕಾನೂನು ಸಲಹೆಗಾರ­ರನ್ನು ನೇಮಿಸಿಕೊಳ್ಳುತ್ತವೆ. ನಿಮ್ಮಲ್ಲಿ ಅನುಭವ ಹಾಗೂ ದಕ್ಷತೆ ಇದ್ದರೆ ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು, ವಿಮಾ ನಿಗಮಗಳು ಪರೀಕ್ಷೆ ನಡೆಸಿ ಅರ್ಹ ವಕೀಲರನ್ನು ಸಲಹೆಗಾರರನ್ನಾಗಿ ಆಯ್ದುಕೊಳ್ಳುತ್ತವೆ.

ಕಾನೂನು ಹೊರಗುತ್ತಿಗೆ
ಇವೆಲ್ಲದರ ಹೊರತಾಗಿ ಈಗೀಗ ಕಾನೂನು ಹೊರಗುತ್ತಿಗೆಯ ಮಾತು ಸಹ ಕೇಳಿ ಬರುತ್ತಿದೆ. ಈ ಕ್ಷೇತ್ರದಲ್ಲಿ ಭಾರತಕ್ಕೆ ವಿಪುಲ ಅವಕಾಶಗಳಿವೆ ಎಂದು ಈಚೆಗಷ್ಟೇ ಅಮೆರಿಕದ ಸಂಶೋಧನಾ ಕಂಪೆನಿಯ ವರದಿ ತಿಳಿಸಿದೆ. 2015ರ ವೇಳೆಗೆ 79 ಸಾವಿರ ಉದ್ಯೋಗಾವಕಾಶ ಲಭ್ಯವಾಗುತ್ತದೆ ಎಂದು ಈ ವರದಿ ಹೇಳಿದೆ.

ಕಾನೂನು ಹೊರಗುತ್ತಿಗೆ ಕೆಲಸ ನಿಭಾಯಿಸುವಾಗ ಅಂತರ ರಾಷ್ಟ್ರೀಯ ಕಾನೂನುಗಳ ಪರಿಚಯ ಅಗತ್ಯ. ಹೊರಗುತ್ತಿಗೆ ನೀಡುವ ವಿದೇಶಿ ಕಂಪೆನಿಗಳೇ ಆ ದೇಶದ ಕಾನೂನಿನ ಬಗ್ಗೆ ಪ್ರಾಥಮಿಕ ಮಾಹಿತಿ, ತರಬೇತಿ ನೀಡುತ್ತವೆ. ಅಂತರ್ಜಾಲ ನಮ್ಮ ಮನೆ ಮನವನ್ನು ಹೊಕ್ಕಿರುವ ಈ ದಿನಗಳಲ್ಲಿ ಸೈಬರ್ ಅಪರಾಧ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ತಾಂತ್ರಿಕ ಪರಿಣತಿ ಹೊಂದಿದವರು ಹಾಗೂ ಕಾನೂನು ವಿದ್ಯಾರ್ಥಿಗಳು ಸೈಬರ್ ಕಾನೂನು ಅಧ್ಯಯನ ಮಾಡಿದಲ್ಲಿ ವಿಪುಲ ಅವಕಾಶಗಳಿವೆ.

ಕಾನೂನು ಶಿಕ್ಷಣವು ಜಾಗತೀಕರಣದ ಹಿನ್ನೆಲೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕಾನೂನು ಶಿಕ್ಷಣದಲ್ಲಿ ಸಮಗ್ರ  ಸುಧಾರಣೆಗಳಾಗಿದ್ದು, ಕಾಲೇಜುಗಳು ಪೂರ್ಣಕಾಲಿಕ ವೃತ್ತಿಪರ ಕಾಲೇಜುಗಳಾಗಿವೆ. ನ್ಯಾಯ ಆಡಳಿತ ವ್ಯವಸ್ಥೆಗೆ ಪೂರಕವಾಗಿರುವ ಕಾನೂನಿನ ಶಿಕ್ಷಣವನ್ನು ಈ ಕಾಲೇಜುಗಳು ನೀಡುತ್ತಿವೆ. ಇತ್ತೀಚೆಗೆ ಸೇವಾ ಕ್ಷೇತ್ರ ವಿಶಾಲವಾಗಿ ಬೆಳೆಯುತ್ತಿದ್ದು, ಕಾನೂನು ಶಿಕ್ಷಣ ಪಡೆದವರಿಗೆ ಸಾಕಷ್ಟು ಅವಕಾಶಗಳು ಸಿಗುವಂತಾಗಿದೆ. ಜಾಗತಿಕ ಸ್ಪರ್ಧೆಗೆ ತಕ್ಕಂತೆ ಪಠ್ಯಕ್ರಮ ರೂಪಿಸಲಾಗಿದೆ.

ಸರ್ಕಾರಿ ಸಂಸ್ಥೆ, ಬಹುರಾಷ್ಟ್ರೀಯ ಕಂಪೆನಿ, ಸೇನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಇಂದಿನ ಕಾನೂನು ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೊಣೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ. ಹೀಗಾಗಿ ವಕೀಲ ವೃತ್ತಿ ಎಂದಿಗೂ `ಎವರ್‌ಗ್ರೀನ್'.

ಬರುವ ಐದು ವರ್ಷಗಳಲ್ಲಿ ಭಾರತೀಯ ಕಾನೂನು ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಲಿದೆ. ಮೋನಿಕಾ ಲೆವಿನ್‌ಸ್ಕಿ ಅವರೊಂದಿಗಿನ ಲೈಂಗಿಕ ಹಗರಣದಲ್ಲಿ ಸಿಲುಕಿರುವ ಬಿಲ್ ಕ್ಲಿಂಟನ್ ಆ ಪ್ರಕರಣದಿಂದ ಮುಕ್ತಿ ಪಡೆಯಲು ತಮಗೆ ನೆರವಾಗುತ್ತಿರುವ ವಕೀಲರ ಶುಲ್ಕ ಪಾವತಿಸಲು ತಮ್ಮ ಆಸ್ತಿಪಾಸ್ತಿ ಅಲ್ಲದೆ ವಿವಿಧೆಡೆ ಭಾಷಣ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ಅಮೆರಿಕದಲ್ಲಿ ಶುಲ್ಕ ಜಾಸ್ತಿ ಇರುವುದರಿಂದ ಭಾರತೀಯ ವಕೀಲರಿಗೆ ಬೇಡಿಕೆ ಹೆಚ್ಚಿದೆ. ಬೌದ್ಧಿಕ ಹಕ್ಕು ಕಾಯ್ದೆ ಬಂದ ನಂತರವಂತೂ ವಕೀಲರ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

ಹೊಸ ಸಾಧ್ಯತೆಗಳೇನು?

1. ವಕೀಲಿ ವೃತ್ತಿ: ಕಾನೂನು ಓದಿದವರು ಆಡಳಿತಾತ್ಮಕ ನ್ಯಾಯ ಮಂಡಳಿಗಳು, ತೆರಿಗೆ ನ್ಯಾಯ ಮಂಡಳಿಗಳು, ಗ್ರಾಹಕರ ಸಂರಕ್ಷಣಾ ವೇದಿಕೆ, ಕಾರ್ಮಿಕ ನ್ಯಾಯ ಮಂಡಳಿಗಳಲ್ಲಿ ಪ್ರ್ಯಾಕ್ಟೀಸ್ ಮಾಡಬಹುದು. ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳು, ಕೆಳಹಂತದ ನ್ಯಾಯಾಲಯಗಳು, ಹೈಕೋರ್ಟ್, ಸುಪ್ರೀಂಕೋರ್ಟ್‌­­ವರೆಗೆ ಪ್ರ್ಯಾಕ್ಟೀಸ್ ಮಾಡಲು ಸಹ ಸಾಕಷ್ಟು ಅವಕಾಶ ಇರುತ್ತದೆ.

ಯಶಸ್ವಿ ವಕೀಲರಾಗಲು ಶೈಕ್ಷಣಿಕ ಸಾಧನೆ ಅತ್ಯುತ್ತಮ ಆಗಿರಲೇ­ಬೇಕೆಂದಿಲ್ಲ. ಸಾಮಾನ್ಯ ಇಂಗ್ಲಿಷ್, ಕೊಂಚ ಜಾಣ್ಮೆ, ಸಮಯ ಪ್ರಜ್ಞೆ, ದಿಟ್ಟತನ, ಮಾತುಗಾರಿಕೆ, ವಿಶ್ಲೇಷಣಾ ಸಾಮರ್ಥ್ಯದಿಂದ ಕಕ್ಷಿ­ದಾರರ ಮನ ಗೆಲ್ಲಬಹುದು. ವೃತ್ತಿಯಲ್ಲಿ ಎವರೆಸ್ಟ್ ತಲುಪಬಹುದು.

2. ನ್ಯಾಯಾಧೀಶ ಹುದ್ದೆ: ಈಗ ಕಾನೂನು ಪದವಿ ಮುಗಿಸಿದ ತಕ್ಷಣ ನ್ಯಾಯಾಧೀಶರಾಗಬಹುದು. ಮೊದಲನೆಯದಾಗಿ ಜೂನಿಯರ್ ಡಿವಿಜನ್‌ನಲ್ಲಿ ಸಿವಿಲ್ ಜಡ್ಜ್ ್ ಅಥವಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಳ್ಳಲು ಪ್ರಾಥಮಿಕ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎದುರಿಸಬೇಕಾಗುತ್ತದೆ.  ಎರಡನೆಯ­ದಾಗಿ ನೇರವಾಗಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿ ನೇಮಕಾತಿ ಹೊಂದಲು ಕನಿಷ್ಠ 7 ವರ್ಷಗಳ ವಕೀಲಿ ವೃತ್ತಿಯ ಅನುಭವ­ದೊಂದಿಗೆ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ. ವಕೀಲಿ ವೃತ್ತಿಯ 10 ವರ್ಷಗಳ ಅನುಭವದ ನಂತರ ವಕೀಲರು ತಮ್ಮ ಅರ್ಹತೆ ಆಧರಿಸಿ ಹೈಕೋರ್ಟ್ ನ್ಯಾಯಾಧೀಶರಾಗಬಹುದು.

3. ಪ್ರಾಸಿಕ್ಯೂಟರ್: ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ನಿರ್ದೇಶಕರ ಇಲಾಖೆಯು ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟ್ (ಎ.ಪಿ.ಪಿ.) ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌­ಗಳನ್ನು (ಪಿ.ಪಿ.) ರಾಜ್ಯದ ಪರವಾಗಿ ಪ್ರಕರಣಗಳನ್ನು ನಡೆಸಲು ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಪ್ರಾಥಮಿಕ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುತ್ತದೆ. ರಾಜ್ಯ ಸರ್ಕಾರ ವಕೀಲರ ಸಂಘದಿಂದ ಕೆಲವು ಸದಸ್ಯರನ್ನು ಆದ್ಯತೆಯ ಮೇರೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಬಹುದು.

4. ಕಾನೂನು ಅಧಿಕಾರಿ: ಸರ್ಕಾರ ಆಡಳಿತ ಹಾಗೂ ವ್ಯವಹಾರ ನಡೆಸಲು ಕಾನೂನು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳ­ಬಹುದು. ಉದಾಹರಣೆಗೆ ಸೆಂಟ್ರಲ್ ಬ್ಯೂರೊ ಆಫ್ ಇನ್‌ವೆಸ್ಟಿ­ಗೇಷನ್ (ಸಿಬಿಐ) ತನ್ನ ಪ್ರಕರಣಗಳನ್ನು ನಡೆಸಲು, ಸಲಹೆ ನೀಡಲು ಪಬ್ಲಿಕ್ ಪ್ರಾಸಿಕ್ಯೂಟರ್‌­ಗಳನ್ನು ಯುಪಿ­ಎಸ್‌ಸಿ ಪರೀಕ್ಷೆ, ಸಂದರ್ಶ­ನದ ಮೂಲಕ ನೇಮಕ ಮಾಡಿಕೊಳ್ಳಬಹುದು. ಪೊಲೀಸ್,  ಸಿ.ಒ.ಡಿ. ಇಲಾಖೆ­ಗಳಲ್ಲಿ ಕಾನೂನು ಪದವೀಧರರನ್ನು ಅಪರಾಧ ತನಿಖಾಧಿಕಾರಿಯಾಗಿ ನೇಮಿಸಿಕೊಳ್ಳಬಹುದು.

ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್‌ಗಳಲ್ಲಿ ಕಾನೂನು ಅಧಿಕಾರಿಗಳಾಗಿ ನೇಮಕಾತಿ ಹೊಂದಬ­ಹುದು. ಕೆಎಸ್‌ಆರ್‌ಟಿಸಿ, ಕರ್ನಾಟಕ ನಗರ ಮೂಲಸೌಲಭ್ಯ ಅಬಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಆರ್‌ಬಿಐ, ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತೀಯ ಸ್ಪರ್ಧಾತ್ಮಕ ಆಯೋಗ, ಭಾರತೀಯ ಬಂದರು ಟ್ರಸ್ಟ್‌­ಗಳು, ಕರ್ನಾಟಕ ವಿದ್ಯುತ್ ನಿಗಮ, ಕಾನೂನು ಮತ್ತು ನ್ಯಾಯ ಸಚಿವಾಲಯ, ವಿಧಾನ ಪರಿಷತ್ ಸಹಾಯಕ, ಉಪ ಕಾನೂನು ಸಲಹೆಗಾರ, ಬಿಎಚ್‌ಇಎಲ್, ಎಫ್‌ಸಿಐ, ವಿಮಾ ಕಂಪೆನಿ ಇತ್ಯಾದಿ­ಗಳಲ್ಲಿ ಅವುಗಳ ಪರವಾಗಿ ಪ್ರಕರಣ ನಡೆಸಲು ಅವಕಾಶ ಇರುತ್ತದೆ.

5. ಸೇನೆಯಲ್ಲಿ: ಸೇನಾ ನ್ಯಾಯಮಂಡಳಿ ಮುಂದೆ ನಡೆಯುವ  ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಬಹುದು.

6. ಕಾನೂನು ಸಂಸ್ಥೆಗಳು:  ಕಾನೂನು ಸಂಸ್ಥೆಗಳು ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿವೆ. ಹೀಗೆ ನೇಮಕ­ಗೊಂಡ­ವರು ತಿಂಗಳಿಗೆ 30,000 ದಿಂದ 50,000 ರೂಪಾಯಿ­ವರೆಗೆ ಸಂಬಳ ಪಡೆಯುತ್ತಾರೆ. ಪರಿಣತರು ವರ್ಷಕ್ಕೆ 10 ರಿಂದ 15 ಲಕ್ಷ ರೂಪಾಯಿವರೆಗೂ ಸಂಬಳ ಪಡೆಯುತ್ತಾರೆ. ವಿವಿಧ ಕಾನೂನು ಸಂಸ್ಥೆಗಳು, ಕಾರ್ಪೊ­ರೇಟ್ ಆಸ್ಪತ್ರೆಗಳು ಸಹ ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತವೆ.

7. ಖಾಸಗಿ ಕಾನೂನು ಅಧಿಕಾರಿ: ಖಾಸಗಿ ಕೈಗಾರಿಕೆಗಳಲ್ಲಿ, ಸಂಸ್ಥೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಬಹುದು. ಉದಾಹರಣೆಗೆ ಇನ್ಫೊಸಿಸ್ ಕಂಪೆನಿ ತನ್ನದೇ ಆದ ಕಾನೂನು ವಿಭಾಗವನ್ನು ಹೊಂದಿದ್ದು, 15ರಿಂದ 20 ವಕೀಲರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

8. ಸರ್ಕಾರೇತರ ಸಂಸ್ಥೆಗಳು: ಮಾನವ ಹಕ್ಕು, ಪರಿಸರ ರಕ್ಷಣೆ, ಮಹಿಳೆ ವಿರುದ್ಧ ದೌರ್ಜನ್ಯ ಮುಂತಾದ ವಿಷಯಗಳಲ್ಲಿ ಸಲಹೆಗಾರ­ರಾಗಿ, ಸಂಶೋಧಕರಾಗಿ ಸೇವೆ ಸಲ್ಲಿಸಬಹುದು.

9. ಅಂತರ ರಾಷ್ಟ್ರೀಯ ಸಂಸ್ಥೆಗಳು: ಪ್ರತಿಭಾನ್ವಿತ ಕಾನೂನು ಪದವೀಧರರು ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ಧಿ ಮಂಡಳಿ (ಎಡಿಬಿ) ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಟನೆ, ಅಂತರ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂತರ ರಾಷ್ಟ್ರೀಯ ರೆಡ್‌ಕ್ರಾಸ್ ಸೊಸೈಟಿ, ಯುನೈಟೆಡ್ ನ್ಯಾಷ­ನಲ್ ಡೆವಲಪ್‌­ಮೆಂಟ್ ಪ್ರೋಗ್ರಾಂ ಮುಂತಾದೆಡೆ ಸೇವೆ ಸಲ್ಲಿಸಬಹುದು.

10. ಮಧ್ಯಸ್ಥಗಾರ: ವೃತ್ತಿನಿರತ ವಕೀಲರು ನ್ಯಾಯಾಲಯದಲ್ಲಿ ಇರುವ ಪ್ರಕರಣ­ಗಳಿಗೆ ಹಾಗೂ ನ್ಯಾಯಾಲಯಕ್ಕೆ ಪ್ರಕರಣಗಳನ್ನು ಸಲ್ಲಿಸುವ ಮೊದಲು ಬೇಕಾದ ಸಲಹೆಗಳನ್ನು ನೀಡಲು ಮಧ್ಯಸ್ಥಗಾ­ರ­­ರಾಗಿ ಲೋಕ್ ಅದಾಲತ್‌ನಲ್ಲೂ ಕೆಲಸ ಮಾಡಬಹುದು.

11. ಕಾನೂನು ಸಲಹೆಗಾರರು: ಅನೇಕರು ತಮ್ಮ ವೈಯಕ್ತಿಕ ಕುಟುಂಬದ ಆಸ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಸಲಹೆಗಳಿಗೆ ಕಾನೂನಿನ ಪರಿಹಾರ ಕಂಡುಕೊಳ್ಳಲು ಸಲಹೆಗಾರರಾಗಿ ವಕೀಲ­ರನ್ನು ಸಂಪರ್ಕಿಸುತ್ತಾರೆ. ಆಗ ವಕೀಲರು ಒಳ್ಳೆಯ ಸಮಾಜವನ್ನು ನಿರ್ಮಿಸುವ ಕಾನೂನಿನ ಶಿಲ್ಪಿಗಳಾಗಿ ಸೇವೆ ಸಲ್ಲಿಸಬಹುದು.

12. ಸಂಧಾನಕಾರ: ಇತ್ತೀಚೆಗೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಹಾಗೂ ಕಂಪೆನಿಗಳನ್ನು ಪ್ರತ್ಯೇಕಿಸುವುದು, ಪಾಲು ಮಾಡಿಕೊಳ್ಳು­ವುದು, ಇನ್ನೊಂದು ಕಂಪೆನಿಯನ್ನು ಕೊಂಡುಕೊಳ್ಳುವಂತಹ ವಿಷ­ಯ­ಗಳಲ್ಲಿ ವಕೀಲರು ಸಂಧಾನಕಾರರಾಗಿ ಸೇವೆ ಸಲ್ಲಿಸಬಹುದು. ಅಂತರ ರಾಷ್ಟ್ರೀಯ ಕಂಪೆನಿಗಳಲ್ಲಿ ಈ ಅವಕಾಶ ಹೆಚ್ಚಾಗಿ ಲಭ್ಯವಿದೆ.

13. ಕಾನೂನಿನ ಸಂಶೋಧನೆ, ಸುಧಾರಣೆ: ಬಹಳಷ್ಟು ವರ್ಷ ಕಾನೂನಿನ ಸಂಶೋಧನೆಯನ್ನು ಗ್ರಂಥಾಲಯದಲ್ಲಿ ಪುಸ್ತಕಗಳ ಸಹಾಯದಿಂದ ಮಾತ್ರ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗಿನ ಸಾಮಾಜಿಕ ಬದಲಾವಣೆ ಹಿನ್ನೆಲೆಯಲ್ಲಿ ಗ್ರಂಥಾಲಯ ಸಹಾಯಕ ಸಂಶೋಧನೆ ಜೊತೆಗೆ ವಾಸ್ತವಿಕ ಸಂಶೋಧನೆಗೂ (ಎಂಪಿರಿಕಲ್ ರಿಸರ್ಚ್) ಬಹಳಷ್ಟು ಅವಕಾಶವಿದೆ. ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕೆ ವಾಸ್ತವಿಕ ಸಂಶೋಧನೆ ಸಹಕಾರಿ.

ಉದಾಹರಣೆಗೆ ಸಾಮಾಜಿಕ ಭದ್ರತಾ ಮಸೂದೆ, ಅಸಂಘಟಿತ ವಲಯದ ಕೆಲಸಗಾರರಿಗೆ 2005ರ ಮಸೂದೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ವಾಸ್ತವಿಕ ಸಂಶೋಧನೆ ಮಾಡುವ ಅವಕಾಶ ಸ್ನಾತಕೋತ್ತರ ಪದವೀಧರರಿಗೆ ಇದೆ. ಭಾರತೀಯ ಕಾನೂನು ಆಯೋಗ, ಟಾಟಾ ಇನ್‌ಸ್ಟಿಟ್ಯೂಟ್, ಶ್ರೀರಾಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿ­ಯಲ್ ರಿಲೇಷನ್ಸ್, ಇಂಡಿಯನ್ ಲಾ ಇನ್‌ಸ್ಟಿಟ್ಯೂಟ್ ಇತ್ಯಾದಿಗಳಲ್ಲಿ ಸಂಶೋಧನೆ ಮಾಡಬಹುದಾಗಿದೆ. (ಯುಜಿಸಿಯ ಜೆ.ಆರ್.ಎಫ್.ನ ಅಡಿ ಸಂಶೋಧನೆಗೆ ಮುಂದಾಗುವವರಿಗೆ 25 ಸಾವಿರ ರೂಪಾಯಿ ಮತ್ತು ಇತರ ಭತ್ಯೆಗಳನ್ನು ಒಳಗೊಂಡ ಮಾಸಿಕ ಫೆಲೋಷಿಪ್ ಸಿಗುತ್ತದೆ. ಪಿಎಚ್.ಡಿ. ಪದವೀಧರರು ವಿವಿಧ ವಲಯಗಳಲ್ಲಿ ಕನಿಷ್ಠ 40 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದಾರೆ.)

14. ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್: ಇತ್ತೀಚೆಗೆ ಪ್ರಚಲಿತವಿರುವ ಬಹಳಷ್ಟು ಅವಕಾಶಗಳನ್ನು ಒಳಗೊಂಡ ಕ್ಷೇತ್ರವೆಂದರೆ ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್ (ಎಲ್‌ಪಿಒ) ಅಂತರ ರಾಷ್ಟ್ರೀಯ ಮಟ್ಟದ ವ್ಯವಹಾರಕ್ಕೆ ಸಂಬಂಧಪ­ಟ್ಟಂತೆ ವಿವಿಧ ದೇಶಗಳ ಜೊತೆ ಕಾನೂನಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಅಮೆರಿಕ ಮತ್ತು ಇಂಗ್ಲೆಂಡ್‌ಗಳು ಹೆಚ್ಚಾಗಿ ತಮ್ಮ ವ್ಯವಹಾರ­ಗಳಿಗೆ ವಕೀಲರ ಸೇವೆ ಪಡೆಯುತ್ತಿವೆ. ಲೀಗಲ್ ಪ್ರೋಸೆಸ್ ಔಟ್ ಸೋರ್ಸಿಂಗ್ ಕಂಪೆನಿಗಳು ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ಕೋಲ್ಕತ್ತ ಮುಂತಾದ ದೊಡ್ಡ ಪಟ್ಟಣಗಳಲ್ಲಿ ಇದ್ದು, ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತಿವೆ.

15. ಕಾನೂನು ಪತ್ರಕರ್ತರು: ಎಲ್ಲ ಪತ್ರಿಕೆಗಳೂ ಕಾನೂನಿನ ವಿಚಾರಗಳನ್ನು ವರದಿ ಮಾಡುತ್ತಿವೆ. ತೆರಿಗೆ, ಷೇರು ವಿನಿಮಯ, ಗ್ರಾಹಕರ ರಕ್ಷಣೆ, ವೈವಾಹಿಕ ವಿವಾದಗಳು, ವ್ಯವಹಾರಕ್ಕೆ ಸಂಬಂಧ­ಪಟ್ಟ ವಿವಾದ, ನ್ಯಾಯಾಲಯಗಳ ತೀರ್ಪು, ಸರ್ಕಾರಿ ಮಸೂದೆ ಕುರಿತ ವರದಿಗಳಿಗಾಗಿ ಕಾನೂನು ಪದವೀಧರರು ಪತ್ರಕರ್ತರಾಗಿ ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಇದೆ.

16. ಸುಪ್ರೀಂಕೋರ್ಟ್: ಇಲ್ಲಿ ಹಿರಿಯ ವಕೀಲರು ನೇರವಾಗಿ ಪ್ರಕರಣಗಳನ್ನು ತೆಗೆದುಕೊಳ್ಳದ ಹಿನ್ನೆಲೆ­ಯಲ್ಲಿ, ಪ್ರಕರಣಗಳನ್ನು ತೆಗೆದುಕೊಳ್ಳಲು ಅಡ್ವೊಕೇಟ್ ಆನ್ ರೆಕಾರ್ಡ್ ಆಗಿ, ವಕಾಲತ್‌ಗೆ ಸಹಿ ಮಾಡಲು ವಕೀಲರಿಗೆ ಅವಕಾಶ ಇದೆ.

17. ಕಾನೂನು ಸೇವಾ ಪ್ರಾಧಿಕಾರ: ಇವು ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 1997ರಿಂದ ಸ್ಥಾಪನೆಯಾಗಿವೆ. ಇದರ ಉದ್ದೇಶ ಬಡವರಿಗೆ ಉಚಿತ ಕಾನೂನು ನೆರವು ನೀಡುವುದು. ಬಡವರ ಪ್ರಕರಣಗಳನ್ನು ನಡೆಸಲು ಸರ್ಕಾರವೇ ವಕೀಲರನ್ನು ನೇಮಿಸಿ ಸಂಭಾವನೆಯನ್ನೂ ನೀಡುತ್ತದೆ. ದೇಶದಲ್ಲಿ ಸುಮಾರು ಶೇ 60ಕ್ಕಿಂತ ಹೆಚ್ಚಿನ ಕಕ್ಷಿದಾರರು ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ವಕೀಲರಿಗೆ ಬಹಳಷ್ಟು ಅವಕಾಶ ಇರುತ್ತದೆ.

18. ವಿಚಾರಣಾ ಅಧಿಕಾರಿ: ವಕೀಲರು ಸಾರ್ವಜನಿಕ, ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ನೌಕರಿಗೆ ಸಂಬಂಧಿಸಿದ ವಿಚಾರಣೆ ನಡೆಸಲು ವಿಚಾರಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಬಹುದಾಗಿದೆ.

19. ಕಾನೂನಿನ ದಸ್ತಾವೇಜು ಹಾಗೂ ದಾಖಲೆ ರಚನೆ: ಪ್ರತಿನಿತ್ಯದ ವ್ಯವಹಾರಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ವಿಚಾರಗಳಿಗೆ ದಾಖಲೆಗಳನ್ನು ರಚಿಸುವ ಹಾಗೂ ನೋಂದಣಿ ಮಾಡಿಸುವ ಕಾರ್ಯ ಪ್ರಮುಖವಾದದ್ದು. ಹಿಂದೆ ಕಾನೂನಿನ ಅರಿವು ಹೊಂದದೆ ದಾಖಲೆ ಪತ್ರಗಳನ್ನು ಬರೆಸುತ್ತಿದ್ದರು. ಅದರಿಂದ ಹಲವಾರು ಕಾನೂನಿನ ಸಮಸ್ಯೆಗಳು ಉಂಟಾಗುತ್ತಿದ್ದವು. ಆದ್ದರಿಂದ ಇತ್ತೀಚೆಗೆ ಯಾವುದೇ ದಾಖಲೆಯನ್ನು ರಚಿಸುವಾಗ ವಕೀಲರ ಅವಶ್ಯಕತೆ ಇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರಗಳು, ಪಾರ್ಟ್‌ನರ್‌ಶಿಪ್ ಡೀಡ್‌ಗಳು, ವಿಲ್ ಇತ್ಯಾದಿಗಳಿಗೆ ಸಂಬಂಧಿಸಿ­ದಂತೆ ಪತ್ರ ರಚಿಸಲು ಹಾಗೂ ನೋಂದಣಿ ಮಾಡಿಸಲು ವಕೀಲರಿಗೆ ಅವಕಾಶಗಳಿವೆ.

20. ಕಾನೂನಿನ ಪ್ರಾಮುಖ್ಯತೆ: ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಮಟ್ಟದ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆ­ಷನರಿ ಪರೀಕ್ಷೆಗಳಲ್ಲಿ ಕಾನೂನನ್ನು ಒಂದು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿ ಉತ್ತಮ ಅಂಕ  ಪಡೆದು, ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್. ಹಾಗೂ ಕೆ.ಎ.ಎಸ್ ಅಧಿಕಾರಿಗಳಾಗಬಹುದು. 2010ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತಮಿಳು ನಾಡಿನ ಕಾನೂನು ವಿದ್ಯಾರ್ಥಿನಿ ಪ್ರಥಮ ರ್್ಯಾಂಕ್‌ ಗಳಿಸಿದ್ದನ್ನು ಮರೆಯುವಂತಿಲ್ಲ.

21. ಕಾನೂನಿನ ಸಹಾಯಕ ಪ್ರಾದ್ಯಾಪಕರು: ಕಾನೂನಿನ ಸ್ನಾತಕೋತ್ತರ ಪದವಿಯಲ್ಲಿ ಶೇ 55, (ಎಸ್.ಸಿ/ಎಸ್.ಟಿ ಶೇ 50) ಅಂಕ ಪಡೆದಿರುವ ಕೇಂದ್ರ ಮಟ್ಟದ ನೆಟ್ (ಎನ್.ಇ.ಟಿ.) ರಾಜ್ಯ ಮಟ್ಟದ ಸ್ಲೆಟ್ (ಎಸ್‌.ಎಲ್‌.ಇ.ಟಿ.) ಅಥವಾ ಪಿಎಚ್.ಡಿ ಪದವೀಧರರು ಕಾನೂನು ವಿ.ವಿ.ಗಳು, ಸರ್ಕಾರಿ ಕಾನೂನು ಕಾಲೇಜುಗಳು, ಅನುದಾನಿತ ಖಾಸಗಿ ಕಾನೂನು ಕಾಲೇಜು ಹಾಗೂ ಇತರ ಕಾನೂನು ಕಾಲೇಜುಗಳಲ್ಲಿ ಯು.ಜಿ.ಸಿ., ಕಾನೂನು ಆಯೋಗ ಹಾಗೂ ಇತರ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕ­ರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬಹುದು.

ರಾಜ್ಯದಲ್ಲಿ 5 ಸರ್ಕಾರಿ ಕಾನೂನು ಕಾಲೇಜುಗಳು, 27 ಅನುದಾನಿತ ಕಾನೂನು ಕಾಲೇಜುಗಳಿವೆ. ಇನ್ನು ಕೆಲವು ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಸಮಿತಿಯನ್ನು ರಚಿಸಲಾಗಿದೆ.

ಮೇಲ್ಕಂಡ ಎಲ್ಲ ಅವಕಾಶಗಳೂ ಕಾನೂನು ಪದವೀಧರರಿಗೆ ಲಭ್ಯ ಇರುವುದರಿಂದ ಅವರು ಈ ಮೂಲಕ, ತಮ್ಮ ಪ್ರತಿಭೆಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲೂ ಸದುಪಯೋಗ ಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT