ಮೂಡಿಗೆರೆ: ಗುರು-ಹಿರಿಯರು ಮತ್ತು ಪೋಷಕರು ಶ್ರಮವಹಿಸಿದಲ್ಲಿ ಮಾತ್ರ ಇಂದಿನ ಮಕ್ಕಳನ್ನು ಸಮಾಜದಲ್ಲಿ ಉತ್ತಮ ಪ್ರಜೆಯಾಗಿಸಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ. ಬಸವರಾಜ್ ಪಾಟೀಲ್ ಹೇಳಿದರು.
ಮೂಡಿಗೆರೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಸರ್ಕಾರಿ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ಭಾನುವಾರ ನಡೆದ ಹಿರಿಯ ನಾಗರಿಕರಿಗೆ ಕಾನೂನು ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತ ನಾಡಿದರು.
ಭಾರತದ ವಿಶಿಷ್ಟ ಸಂಸ್ಕೃತಿ, ಪರಂಪರೆ ಯನ್ನು ಹಿರಿಯರು ಹಿಂದಿನಿಂದಲೂ ಉಳಿಸಿಕೊಂಡು ಬಂದಿದ್ದಾರೆ. ಇಂತಹ ಸಂಸ್ಕೃತಿ, ಪರಂಪರೆಯನ್ನು ತಿಳಿಸಿ, ಆದರ್ಶ, ತತ್ವಗಳನ್ನು ಯುವ ಜನಾಂಗ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶ ಎಸ್.ಜಿ.ಸಲಗರೆ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಹೊಂದಬೇಕು. ಜನಸಾಮಾನ್ಯರಿಗಾಗಿ ಸರ್ಕಾರ ಕಾನೂನಿನ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನು ಎಲ್ಲರೂ ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
ಸಮಾಜ ಕಲ್ಯಾಣಾಧಿಕಾರಿ ಹರ್ಷಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಬಿ.ಎಚ್. ಕೃಷ್ಣಪ್ಪ ಇಲಾಖೆಯಲ್ಲಿ ಹಿರಿಯ ನಾಗರಿಕರು ಸರಕಾರದ ಅನುದಾನಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ವಕೀಲ ಬಿ. ಜಗದೀಶ್ ಅಮಾನ್ಯಗೊಂಡ ಚೆಕ್ಗಳ ಬಗ್ಗೆ, ಎಚ್.ಕೆ.ವಸಂತೇಗೌಡ, ಹಿಂದೂ ಮಹಿಳೆಯರ ಆಸ್ತಿಯ ಹಕ್ಕುಗಳ ಬಗ್ಗೆ, ಎನ್.ಎಸ್.ಜಯರಾಂ, ಗ್ರಾಹಕರ ಹಿತರಕ್ಷಣಾ ಕಾಯ್ದೆಗಳ ಬಗ್ಗೆ ಹಾಗೂ ಎಚ್.ಕೆ.ರಘು ಮರಣ ಶಾಸನ ಪತ್ರದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ.ಸಿ.ದರ್ಶನ್, ಮಾಜಿ ಅಧ್ಯಕ್ಷ ಬಿ.ಟಿ.ನಟರಾಜ್, ತಹಶೀಲ್ದಾರ್ ಚಿನ್ನರಾಜು, ಜಿ.ವಿ.ಅರುಣ, ಸಹಾಯಕ ಸರ್ಕಾರಿ ವಕೀಲರಾದ ನಾಗಸುಂದರಮ್ಮ, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಶಿವಾನಂದ್, ಉಪಾಧ್ಯಕ್ಷ ಡಿ.ಕೆ. ರಾಮೇಗೌಡ, ನಿವೃತ್ತ ಉಪ ತಹಶೀಲ್ದಾರ್ ಗಣಪತಿ ಆಚಾರ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.