ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಅವರದೇ ಆದ ನೀತಿ ನಿಯಮಗಳಿವೆ. ಆದರೆ ಕಾನೂನು ಮಾತ್ರ ಎಲ್ಲರಿಗೂ ಸರಿ ಸಮನಾಗಿ ಅನ್ವಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕಾದ್ದು ಅವಶ್ಯಕ ಎಂದು ಜಿಲ್ಲಾ ನ್ಯಾಯಾಧೀಶರಾದ ನರೇಂದ್ರ ಕುಮಾರ್ ಗುಣಕಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಡೀಡ್ಸ್ ಮಂಗಳೂರು, ಉಡುಪಿ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ ಆಶ್ರಯದಲ್ಲಿ ನಗರದ ಜಿಲ್ಲಾ ಬಾಲ ಭವನದಲ್ಲಿ ಮಂಗಳವಾರ ನಡೆದ ಕಾನೂನು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಸಾವಿತ್ರಿ ಭಟ್ ಮಾತನಾಡಿ, ಜೀವನದಲ್ಲಿ ಕಾನೂನಿನ ಅರಿವು ಬಹಳ ಮುಖ್ಯ. ಹೀಗಾಗಿ ಜೀವನಕ್ಕೆ ಬೇಕಾಗುವ ಕೆಲವೊಂದು ಕಾನೂನಿನ ಬಗ್ಗೆಯಾದರೂ ಅರಿವು ಹೊಂದಿರುವುದು ಅಗತ್ಯ ಎಂದು ಹೇಳಿದರು. ಪ್ರತಿಯೊಂದು ವಿಚಾರಗಳೂ ಕಾನೂನು ಚೌಕಟ್ಟಿ ನಲ್ಲಿಯೇ ನಡೆಯಬೇಕಾ ಗುತ್ತವೆ. ನಮಗೆ ಕಾನೂನು ಬೇಡವೆಂದರೂ ಕಾನೂನು ನಮ್ಮನ್ನು ಬಿಡುವುದಿಲ್ಲ. ಹೀಗಾಗಿ ಜನಸಾಮಾನ್ಯರ ದೈನಂದಿನ ವಿಚಾರಗಳಿಗೆ ಅಗತ್ಯವಾದ ಕಾನೂನು ಮಾಹಿತಿಗಳನ್ನು ನೀಡಬೇಕಾದ ಅಗತ್ಯವಿದೆ ಎಂದು ಅವರು ಕಿವಿಮಾತು ಹೇಳಿದರು. ಡೀಡ್ಸ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಉಡುಪಿ ವಕೀಲರ ಸಂಘ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ ಇದ್ದರು.