ಹಿರಿಯೂರು: ಸಂವಿಧಾನದಲ್ಲಿ ಮಾನವನ ಹಕ್ಕು ಮತ್ತು ಕರ್ತವ್ಯಗಳ ರಕ್ಷಣೆಗೆ ರಚಿಸಿರುವ ಕಾನೂನನ್ನು ದೇಶದ ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜು ಕರೆ ನೀಡಿದರು.
ತಾಲ್ಲೂಕಿನ ಐನಹಳ್ಳಿಯಲ್ಲಿ ಶುಕ್ರವಾರ ಆರನಕಟ್ಟೆ ಸರ್ಕಾರಿ ಪಿಯು ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ಶಿಬಿರದಲ್ಲಿ `ಕಾನೂನು ಅರಿವು~ ವಿಚಾರ ಕುರಿತು ಅವರು ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಂಡರೆ ಸಮಾಜದಲ್ಲಿ ನೆಮ್ಮದಿ ತಾನೆ ತಾನಾಗಿ ನೆಲೆಸುತ್ತದೆ. ಎಲ್ಲರೂ ಕಾನೂನಿನ ಅರಿವು ಪಡೆಯಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಜಿ.ಪಂ. ಉಪಾಧ್ಯಕ್ಷ ಕೆ. ದ್ಯಾಮೇಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸುವ ಶಕ್ತಿ ಶಿಕ್ಷಕರಲ್ಲಿದೆ. ಮಕ್ಕಳನ್ನು ಹೊಸ ಹೊಸ ಆವಿಷ್ಕಾರಗಳಿಗೆ ಒಡ್ಡಿಕೊಳ್ಳುವಂತೆ ಮಾಡಬೇಕು. ಶಿಕ್ಷಕ-ವಿದ್ಯಾರ್ಥಿ ಸಂಬಂಧ ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳ್ಳಬಾರದು. ಸಮಾಜಕ್ಕೆ ಹೊಸ ಚಿಂತನೆಗಳ ಹರಿಕಾರರನ್ನು ಕೊಡುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಅವರು ತಿಳಿಸಿದರು.
ಹಿರಿಯ ವಕೀಲರಾದ ಮೀನಾಕ್ಷಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಹೆಚ್ಚು ಒತ್ತು ನೀಡಬೇಕು. ಹಿಂದುಳಿದಿರುವಿಕೆಯ ಹಿಂದಿನ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಬೇಕು. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನಸ್ಸು ಅರಿತು ಬೆಂಬಲಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಅಬ್ಬಿನಹೊಳೆ ಪಿಎಸ್ಐ ಚಿದಾನಂದಮೂರ್ತಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಧನಲಕ್ಷ್ಮೀ, ಶಿಲ್ಪಶ್ರೀ, ನವೀನ್, ತಿಪ್ಪೇಸ್ವಾಮಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ಟಿ. ಸುರೇಶ್ ಹಾಜರಿದ್ದರು. ಟಿ.ಎನ್. ವೆಂಕಟೇಶ್ ಸ್ವಾಗತಿಸಿದರು. ಕಾಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಹಳದಪ್ಪ ವಂದಿಸಿದರು.