ಬೆಂಗಳೂರು: `ಹೊಸ ಕಾನೂನುಗಳು ಸಾಮಾಜಿಕ ಕ್ರಾಂತಿಯಲ್ಲಿ ಮಹತ್ತರ ಪಾತ್ರ ಪಡೆದುಕೊಳ್ಳುವ ಮೂಲಕ ಸಾರ್ಥಕತೆಯನ್ನು ಹೊಂದಬೇಕು~ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ಯೂನಿವರ್ಸಿಟಿ ಲಾ ಕಾಲೇಜು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಐದು ವರ್ಷಗಳ ಎಲ್ಎಲ್ಬಿ ಕೋರ್ಸ್ನ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಕಾನೂನು ಕೇವಲ ಆಳುವವರ ಸ್ವತ್ತಾಗದೇ ಜನಸಾಮಾನ್ಯರ ನಾಡಿಮಿಡಿತವಾಗಬೇಕು. ಈ ದಿಸೆಯಲ್ಲಿ ಕಾನೂನು ಪದವೀಧರರು ಶ್ರಮಿಸಬೇಕು~ ಎಂದರು.
ಒಡಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ` ಪ್ರಸ್ತುತ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದೇ ಉತ್ತಮ ಪರಿಹಾರ~ ಎಂದು ಅಭಿಪ್ರಾಯಪಟ್ಟರು.
ದೆಹಲಿಯ ವಿವೇಕಾನಂದ ವೃತ್ತಿಪರ ಅಧ್ಯಯನ ಸಂಸ್ಥೆಯ ಪ್ರಧಾನ ನಿರ್ದೇಶಕ ಪ್ರೊ. ವಿ.ಬಿ.ಕುಟಿನ್ಹೊ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಎನ್.ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.