ಹಳೇಕೋಟೆ (ಹೊಳೆನರಸೀಪುರ): ಸಾರ್ವಜನಿಕರು ಕಾನೂನು ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಕಾನೂನು ಅರಿವು ಇಲ್ಲದೆ ಮಾಡುವ ತಪ್ಪುಗಳಿಗೂ ಕ್ಷಮೆ ಇರುವುದಿಲ್ಲ. ಆದ್ದರಿಂದ ಜನರು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಡಿ. ಕಂಬೇಗೌಡ ನಡಿದರು.
ತಾಲ್ಲೂಕಿನ ಹಳೇಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ರೋಟರಿ ಸಂಸ್ಥೆ, ತಾಲ್ಲೂಕು ಉಚಿತ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಕಾನೂನು ಎಲ್ಲರಿಗೂ ಒಂದೇ . ಬಡವರು ಹಣ ಇಲ್ಲ ಎನ್ನುವ ಕಾರಣಕ್ಕೆ ಅನ್ಯಾಯಕ್ಕೆ ಒಳಗಾಗ ಬಾರದು ಎನ್ನುವ ಉದ್ದೇಶದಿಂದ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡುತ್ತದೆ ಎಂದರು.
ಎಪಿಪಿ ಮಲ್ಲಿಕಾರ್ಜನ್ ದೊಡ್ಡಗೌಡರ್ ಗ್ರಾಹಕರ ರಕ್ಷಣೆ ಕಾಯ್ದೆ ಬಗ್ಗೆ, ವಕೀಲ ಜಯಕುಮಾರ್ ಶಿಕ್ಷಣ ಹಕ್ಕು ಕಾಯ್ದೆಬಗ್ಗೆ, ವಕೀಲೆ ಜಯಲಕ್ಮೀ ಭ್ರಷ್ಟಾಚಾರ ನಿಷೇಧ ಕಾಯ್ಧೆ ಬಗ್ಗೆ, ವಕೀಲ ಡಿ. ಶಿವಮೂರ್ತಿ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾತನಾಡಿದರು.
ಕಾನೂನು ವಿದ್ಯಾರ್ಥಿ ವೈ.ಎಸ್. ಶ್ರೀ ಲಕ್ಷ್ಮೀ ಸದೃಡ ಸಮಾಜಕ್ಕೆ ಕಾನೂನು ಅರಿವು ಅತ್ಯವಶ್ಯಕ ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ ಮಾತನಾಡಿದರು.