ಗೋಣಿಕೊಪ್ಪಲು: ವಿದ್ಯಾರ್ಥಿಗಳು ಕಾನೂನು ಪಾಲಕರಾಗಬೇಕು. ಯಾವುದೇ ಕಾರಣಕ್ಕೂ ಕಾನೂನು ಮೀರಿ ನಡೆಯಬಾರದು ಎಂದು ಸ್ಥಳೀಯ ವೃತ್ತ ನಿರೀಕ್ಷಕ ಶೈಲೇಂದ್ರ ಹೇಳಿದರು.
ಕಾವೇರಿ ಕಾಲೇಜಿನ ರಾಜ್ಯಶಾಸ್ತ್ರ ಪ್ರಜ್ಞಾ ಸಂಘ ಉದ್ಘಾಟಿಸಿ ಮಾತನಾ ಡಿದ ಅವರು, ಕಾಲೇಜಿನ ಹೊರಗೆ ಮತ್ತು ಒಳಗೆ ಶಿಸ್ತಿನಿಂದ ನಡೆದು ಕೊಳ್ಳಬೇಕು. ಮೋಜಿಗಾಗಿ ಬೈಕ್ ಸವಾರಿ ಮಾಡಬಾರದು. ರಸ್ತೆಯಲ್ಲಿ ಸಂಚರಿಸುವಾಗ ಸಂಚಾರ ನಿಯಮ ಗಳನ್ನು ಪಾಲಿಸಬೇಕು ಎಂದರು.
ಪಟ್ಟಣದಲ್ಲಿ ಡ್ರಗ್ಸ್ ಜಾಲ ಹರಡಿರುವ ಬಗ್ಗೆ ದೂರುಗಳು ಬರುತ್ತಿವೆ. ವಿದ್ಯಾರ್ಥಿಗಳು ಈ ಬಗ್ಗೆ ಎಚ್ಚರದಿಂದ ಇರಬೇಕು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ವ್ಯವಸ್ಥೆ ಸುಧಾರಣೆಗೆ ಶ್ರಮಿಸಲಿದೆ. ಸಮಾಜ ಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರ ವಹಿಸಬೇಕು ಎಂದರು.
ಪ್ರಾಂಶುಪಾಲ ಐ.ಕೆ.ಬಿದ್ದಪ್ಪ ಮಾತ ನಾಡಿ, ದೇಶಕ್ಕೆ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತವಿಲ್ಲದ ನಾಯಕರ ಅಗತ್ಯವಿದೆ. ವಿದ್ಯಾರ್ಥಿಗಳು ಇಂತಹ ಗುಣ ಮೈಗೂಡಿಸಿಕೊಂಡು ಉತ್ತಮ ನಾಯಕರಾಗಬೇಕು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಅಕ್ಕಮ್ಮ ಪ್ರಾಸ್ತಾವಿಕ ಮಾತುಗಳ ನ್ನಾಡಿದರು. ಅರ್ಪಿತ ಪ್ರಾರ್ಥಿಸಿದರು. ಪವನ್ ಸ್ವಾಗತಿಸಿದರು. ತನ್ವೀರ್ ನಿರೂಪಿಸಿದರು. ತೀಶ್ಮ ವಂದಿಸಿದರು.