ಲಿಂಗಸುಗೂರ: ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಆದರೆ, ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ಕೀಳಾಗಿ ಕಾಣುತ್ತಿದೆ. ಕಾರಣ ಮಹಿಳೆಯರು ಶಿಕ್ಷಣವಂತರಾಗಿ, ಸಮಾಜದ ಮೌಢ್ಯತೆಗಳನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ನಿಟ್ಟಿನಲ್ಲಿ ಕಾನೂನು ಪ್ರಪಂಚ ತಮ್ಮೊಂದಿಗೆ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಾಗರಾಜ ಕುಲಕರ್ಣಿ ಆತ್ಮಸ್ಥೈರ್ಯ ತುಂಬಿದರು.
ಬುಧವಾರ ಅಮರೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆ ಭೋಗದ ವಸ್ತು ಅಲ್ಲ. ಅವಳು ಪುರುಷರಷ್ಟೆ ಸಮರ್ಥವಾಗಿ ಬದುಕು ನಿರೂಪಿಸಬಲ್ಲಳು. ರಾಷ್ಟ್ರಕ್ಕೆ ಮಹಿಳೆಯರ ಕೊಡುಗೆ ಅಪಾರ ಇದೆ ಎಂಬುದರ ಕುರಿತು ಕಾನೂನಾತ್ಮಕ ಜಾಗೃತಿ ಮೂಡಿಸಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಯುನಿಸೆಫ್ ಘಟಕದ ರಾಘವೇಂದ್ರ ಭಟ್ ಮಕ್ಕಳ ಸಂರಕ್ಷಣೆ ಮತ್ತು ಹಕ್ಕುಗಳು. ಸಿಡಿಪಿಒ ಪ್ರಭಾಕರ ಮಹಿಳೆಯರಿಗೆ ಮತ್ತು ಮಕ್ಕಳಿಗೆ ದೊರಕುವ ಸರ್ಕಾರಿ ಸೌಲಭ್ಯಗಳು. ಹಿರಿಯ ನ್ಯಾಯವಾದಿ ಶಂಕರಗೌಡ ಪಾಟೀಲ ಹೆಣ್ಣು ಮಕ್ಕಳಿಗೆ ಕಾನೂನು ಅಡಿಯಲ್ಲಿರುವ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಯಚೂರು ಗ್ರಾಹಕರ ವೇದಿಕೆ ಅಧ್ಯಕ್ಷ ಪಂಪಾಪತಿ. ನ್ಯಾಯಾಧೀಶರಾದ ಎಂ.ಕಣುಮಯ್ಯ. ಬಿ.ಜಿ ದಿನೇಶ. ತಹಸೀಲ್ದಾರ್ ಎಂ.ರಾಚಪ್ಪ. ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಿ.ಆರ್ ಶಿವಮೂರ್ತಿ. ಅಮರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್ ಫೂಲಭಾವಿ. ಕಾರ್ಯದರ್ಶಿ ಡಾ. ಎನ್.ಎಲ್ ನಡುವಿನಮನಿ ಉಪಸ್ಥಿತರಿದ್ದರು.