ಮೂಡಿಗೆರೆ: ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನ್ಯಾಯಾಲಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಹಾಗೂ ಉಚಿತ ಕಾನೂನು ಮಾಹಿತಿಯನ್ನು ಜನರಿಗೆ ನೀಡಲು ಗ್ರಾಮಗಳಿಗೆ ನ್ಯಾಯಾಲಯ ರಥ ಸಂಚಾರ ಆರಂಭಿಸಲಿದೆ. ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಜಿ.ಸಲಗೆರೆ ಮನವಿ ಮಾಡಿದರು.
ಇಲ್ಲಿನ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ವಕೀಲರ ಸಂಘ, ಉಚಿತ ಕಾನೂನು ನೆರವು ಘಟಕ ಶುಕ್ರವಾರ ಆಯೋಜಿಸಿದ್ದ ಸಂಚಾರಿ ನ್ಯಾಯಾಲಯ ರಥ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 2011ರಲ್ಲಿ ಸಂಚಾರಿ ನ್ಯಾಯಾಲಯ ನಾಲ್ಕು ಬಾರಿ ಸಂಚಾರ ಮಾಡಿದೆ. ಈ ಸಂದರ್ಭ ಸುಮಾರು ಮೂರು ಸಾವಿರಕ್ಕೂ ಅಧಿಕ ವಿವಿಧ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಜೆ.ಸಿ.ದರ್ಶನ್ ಮಾತನಾಡಿ, ಹಿರಿಯ ವಕೀಲ ಎಂ.ಎಸ್.ಗೋಪಾಲಗೌಡ ಅವರ ನೇತೃತ್ವದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವನ್ನು ತೆರೆಯಲಾಗಿದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ನ್ಯಾಯಾಲಯ ರಥ ಚಿನ್ನಿಗಾ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಕೇಶವ ಸ್ವಾಗತಿಸಿದರು. ಈ ಸಂದರ್ಭ ವಕೀಲರಾದ ವೆಂಕಟೇಶ್ ಹಾಗೂ ಪ್ರಸನ್ನಕುಮಾರ್ ಉಪನ್ಯಾಸ ನೀಡಿದರು. ಗೋಣಿಬೀಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ರಮೇಶ್ ಸ್ವಾಗತಿಸಿದರು. ವಕೀಲರಾದ ಕೆ.ಎಂ.ಪ್ರಶಾಂತ್, ಮಹೇಶ್, ರಾಘವೇಂದ್ರ, ಉಪನ್ಯಾಸ ನೀಡಿದರು.