ಬೆಂಗಳೂರು: ‘ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ಕಣ್ಣೀರೊರೆಸುವ ಕಾರ್ಯಕ್ಕೆ ವಕೀಲರು ಮುಂದಾಗಬೇಕು’ ಎಂದು ರಾಜ್ಯದ ಅಡ್ವೊಕೇಟ್ ಜನರಲ್ (ಎ.ಜಿ) ಪ್ರೊ.ರವಿವರ್ಮ ಕುಮಾರ್ ಹೇಳಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ಕಾಲೇಜು ನಗರದಲ್ಲಿ ಆಯೋಜಿಸಿರುವ 4ನೇ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಅಣಕು ನ್ಯಾಯಾಲಯ ಸ್ಪರ್ಧೆಗಳಿಂದ ಕಾನೂನು ವಿದ್ಯಾರ್ಥಿಗಳ ಕೌಶಲ ವೃದ್ಧಿಸುತ್ತದೆ. 40 ವರ್ಷಗಳ ಹಿಂದೆ ನಾನು ಕಾನೂನು ವಿದ್ಯಾರ್ಥಿ ಯಾಗಿದ್ದಾಗ ಅಣಕು ನ್ಯಾಯಾಲಯದ ಪರಿಕಲ್ಪನೆಯೇ ಇರಲಿಲ್ಲ. ಆದರೆ, ಇಂದು ಅಣಕು ನ್ಯಾಯಾಲಯ ಸ್ಪರ್ಧೆಗಳಿಂದ ಕಾನೂನು ವಿದ್ಯಾರ್ಥಿಗಳು ಹೆಚ್ಚಿನ ತಿಳಿವಳಿಕೆ ಪಡೆಯಲು ಸಹಾಯವಾಗಿದೆ’ ಎಂದು ತಿಳಿಸಿದರು.
‘ಕಾನೂನು ವಿದ್ಯಾರ್ಥಿಗಳಿಗೆ ದೇಶದ ಸಂವಿಧಾನವೇ ಧರ್ಮಗ್ರಂಥ. ಕಾನೂನು ಸೇವೆ ಮಾನವೀಯ ಕಾರ್ಯ. ಕೇವಲ ಹಣ ಮಾಡು ವದಷ್ಟೇ ಕಾನೂನು ಸೇವೆಯ ಉದ್ದೇಶವಾಗಬಾರದು. ಸಮಾಜಕ್ಕೆ ಏನನ್ನಾ ದರೂ ಒಳಿತನ್ನು ಮಾಡುವತ್ತ ಕಾನೂನು ವಿದ್ಯಾರ್ಥಿಗಳು ಗಮನ ಹರಿಸಬೇಕು’ ಎಂದು ಅವರು ಹೇಳಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಡಾ.ಥಾಮಸ್ ಸಿ. ಮ್ಯಾಥ್ಯೂ ಮಾತ ನಾಡಿ, ‘ಕನಸುಗಳನ್ನು ಕಾಣುವುದು ಮಾತ್ರವಲ್ಲ, ಅವುಗಳನ್ನು ನನಸಾಗಿಸಿ ಕೊಳ್ಳಲು ವಿದ್ಯಾರ್ಥಿಗಳು ಶ್ರಮಿಸ ಬೇಕು ಎಂದರು. ಕ್ರೈಸ್ಟ್ ಕಾಲೇಜಿನಲ್ಲಿ ಸೆ.15ರವರೆಗೆ ಅಣಕು ನ್ಯಾಯಾಲಯ ಸ್ಪರ್ಧೆ ನಡೆಯಲಿದೆ. ದೇಶ ವಿವಿಧ ಕಾನೂನು ಕಾಲೇಜುಗಳ ಸುಮಾರು 200 ಮಂದಿ ವಿದ್ಯಾರ್ಥಿಗಳು ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದಾರೆ.