ಬೆಂಗಳೂರು: ಎಂ.ಎಸ್.ರಾಮಯ್ಯ ನಗರ ಸಮೀಪದ ಮುತ್ಯಾಲ ನಗರದಲ್ಲಿ ಭಾನುವಾರ ಜಾಹ್ನವಿ (22) ಎಂಬುವರು ಆತ್ಮಹತ್ಯೆ
ಮಾಡಿ ಕೊಂಡಿದ್ದು, ಯಶವಂತಪುರದ ವಸತಿಗೃಹವೊಂದರಲ್ಲಿ ಪವಾರ್ ಶೀತಲ್ ಪಂಡಿತ್ (24) ಎಂಬ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಾನ್ಸ್ಟೆಬಲ್ ನೇಣು ಹಾಕಿಕೊಂಡಿದ್ದಾರೆ.
ಮೂಲತಃ ತುಮಕೂರಿನ ಜಾಹ್ನವಿ ಅವರು ಮುತ್ಯಾಲನಗರ ದಲ್ಲಿರುವ ಅಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ಬಿಬಿಎಂ ಓದಿದ್ದ ಅವರು ಗೋಕುಲ ಬಡಾವಣೆಯ ಟ್ರಾವೆಲ್ಸ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಅವರು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಮನೆಯ ಮೇಲಿನ ಕೊಠಡಿಗೆ ಹೋಗಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣ: ಮಹಾರಾಷ್ಟ್ರ ಮೂಲದ ಪವಾರ್ ಅವರನ್ನು ತಮಿಳುನಾಡಿನ ನೈವೇಲಿಯಲ್ಲಿ ಸಿಐಎಸ್ಎಫ್ ಸೇವೆಗೆ ನಿಯೋಜಿಸಲಾಗಿತ್ತು.
ಪವಾರ್ ಅವರು ಆಗಸ್ಟ್ 30ರಿಂದ ರಜೆ ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಹೋಗಿದ್ದರು. ಸೆಪ್ಟೆಂಬರ್ 17ರಂದು ಕೆಲಸಕ್ಕೆ ಹಾಜರಾಗಬೇಕಿದ್ದ ಅವರು ಅದೇ ದಿನ ಬೆಳಿಗ್ಗೆ ಮಹಾರಾಷ್ಟ್ರದ ಸಾಂಗ್ಲಿಯಿಂದ ರೈಲಿನಲ್ಲಿ ನಗರಕ್ಕೆ ಬಂದು ಯಶವಂತಪುರ ರೈಲು ನಿಲ್ದಾಣ ಸಮೀಪದ ವಸತಿಗೃಹವೊಂದರಲ್ಲಿ ತಂಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪವಾರ್ ಅವರು ಸೆ.18ರಂದು ಕೊಠಡಿಯೊಳಗೆ ಹೋಗಿದ್ದನ್ನು ವಸತಿಗೃಹದ ಕೆಲಸಗಾರರು ನೋಡಿದ್ದರು. ಆ ನಂತರ
ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕೆಲಸಗಾರರು ಭಾನುವಾರ ಬೆಳಿಗ್ಗೆ ಕೊಠಡಿಯ ಬಳಿ ಹೋಗಿ ಪರಿಶೀಲಿಸಿದಾಗ ಅವರು ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ವೃತ್ತಿ ಬದುಕಿನ ಬಗ್ಗೆ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಪವಾರ್ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಶವಂತಪುರ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿವೆ.