ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್ಆರ್ಪಿ) ಕಾನ್ಸ್ಟೇಬಲ್ ಒಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕೆಎಸ್ಆರ್ಪಿ ಮೂರನೇ ತುಕಡಿಯಲ್ಲಿ ಕಾನ್ಸ್ಟೇಬಲ್ ಆಗಿದ್ದ ವಿರೂಪಾಕ್ಷ ನಾಯಕ್ (30) ಆತ್ಮಹತ್ಯೆ ಮಾಡಿಕೊಂಡವರು.
ಚಿತ್ರದುರ್ಗ ಜಿಲ್ಲೆಯ ವಿರೂಪಾಕ್ಷ ಅವರು 2006ರಲ್ಲಿ ಇಲಾಖೆಗೆ ಸೇರಿದ್ದರು. ವಿಜಯಲಕ್ಷ್ಮಿ ಎಂಬುವರನ್ನು ವಿವಾಹವಾಗಿದ್ದ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಕುಟುಂಬ ಸದಸ್ಯರೊಂದಿಗೆ ಕೂಡ್ಲುಗೇಟ್ ಸಮೀಪದ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿರೂಪಾಕ್ಷ ಅವರು ಸ್ನೇಹಿತರು ಮತ್ತು ಸಹೋದ್ಯೋಗಿಗಳ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ಕೊಟ್ಟವರು ಹಣ ಹಿಂದಿರುಗಿಸುವಂತೆ ಅವರಿಗೆ ಒತ್ತಾಯಿಸುತ್ತಿದ್ದರು. ಇದರಿಂದ ಅವರು ಮನ ನೊಂದಿದ್ದರು.
ಶುಕ್ರವಾರ ಸಂಜೆ ಕೆಲಸಕ್ಕೆ ಹೋಗುವುದಾಗಿ ಕುಟುಂಬ ಸದಸ್ಯರಿಗೆ ಹೇಳಿ ಹೋಗಿದ್ದ ಅವರು ಮಡಿವಾಳದ ಕೆಎಸ್ಆರ್ಪಿ ಮೈದಾನಕ್ಕೆ ಬಂದು ಕಬ್ಬಿಣದ ಕಂಬವೊಂದಕ್ಕೆ ನೇಣು ಹಾಕಿ ಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
`ಸಹೋದ್ಯೋಗಿಗಳ ಬಳಿ ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಸಾಲದ ಹಣ ಹಿಂದಿರುಗಿಸುವಂತೆ ಸಹೋದ್ಯೋಗಿಗಳು ಒತ್ತಾಯಿಸುತ್ತಿದ್ದರು. ಅಲ್ಲದೇ ಕೆಲ ಸಹೋದ್ಯೋಗಿಗಳು ಸಾಲ ವಾಪಸ್ ನೀಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದರು.
ಈ ನಡುವೆ ಆರೋಗ್ಯ ಸಹ ಹದಗೆಟ್ಟಿದೆ. ಈ ಎಲ್ಲ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ವಿರೂಪಾಕ್ಷ ಪತ್ರ ಬರೆದಿಟ್ಟಿದ್ದಾರೆ.
ಸಾಲ ಕೊಟ್ಟಿದ್ದ ಕೆಲ ಸಹೋದ್ಯೋಗಿಗಳ ಹೆಸರುಗಳನ್ನು ಅವರು ಆ ಪತ್ರದಲ್ಲಿ ಬರೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.