ಮೂಡಿಗೆರೆ: ತಾಲ್ಲೂಕಿನ ಕಾಫಿ ಬೆಳೆದ ರೈತರಿಗೆ ಕಾಫಿ ಭಾಗಶಃ ಕಹಿಯಾಗತೊಡಗಿದೆ. ಅದರಲ್ಲೂ ಅರೇಬಿಕಾ ಕಾಫಿ ಬೆಳೆಗಾರರಿಗೆ ಪ್ರಸಕ್ತ ಸಾಲು ಮಾತ್ರವಲ್ಲದೇ ಮುಂದಿನ ಸಾಲಿನಲ್ಲೂ ಚೇತರಿಸಿಕೊಳ್ಳದಂತಹ ಪರಿಸ್ಥಿತಿ ಈಗಿನಿಂದಲೇ ಬಿಗಡಾಯಿಸ ತೊಡಗಿದೆ.
ತಾಲ್ಲೂಕಿನಲ್ಲಿ ನಲವತ್ತು ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಯಲಾಗಿದ್ದು, ತಾಲ್ಲೂಕಿನ ಕಾಫೀ ಬೆಳೆಯ ಶೇ. 45 ರಷ್ಟು ಪಾಲನ್ನು ಅರೇಬಿಕಾ ಕಾಫಿಯೇ ತುಂಬಿಕೊಡುತ್ತಿದೆ. ಕಳೆದ ಎಂಟು – ಹತ್ತು ವರ್ಷಗಳ ಹಿಂದೆ ಕಾಫಿ ತಳಿಗಳಾದ ಅರೇಬಿಕಾ ಮತ್ತು ರೋಬಾಸ್ಟಾ ಬೆಲೆಯ ನಡುವೆ ಗಣನೀಯ ವೆತ್ಯಾಸವಿದ್ದು, ರೋಬಾಸ್ಟಾಕ್್ಕಿಂತ ಅರೇಬಿಕಾಕ್ಕೆ ದುಪ್ಪಟ್ಟು ಬೆಲೆಯಿದ್ದಿದ್ದರಿಂದ ಅರೇಬಿಕಾ ಬೆಳೆಗೆ ಒತ್ತು ನೀಡಿ, ಅರೇಬಿಕಾ ಕಾಫಿ ಉತ್ಪಾದನೆಗೆ ರೈತರು ಅತ್ಯುತ್ಸಾಹ ತೋರಿದ್ದು, ಇತ್ತೀಚಿನ ದಿನಗಳ ವರೆಗೂ ರೈತರು ಅರೇಬಿಕಾ ಕಾಫಿಯತ್ತವೇ ಮುಖ ಮಾಡಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಅರೇಬಿಕಾ ಕಾಫಿ ಬೆಳೆ ಮತ್ತು ಬೆಲೆ ಎರಡರಲ್ಲೂ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಅರೇಬಿಕಾವನ್ನು ನಂಬಿದ ಕುಟುಂಬಕ್ಕೆ ನುಂಗಲಾರದ ತುತ್ತಾಗುತ್ತಿದೆ.
ಇಷ್ಟಕ್ಕೆ ಸಾಲದೆಂಬಂತೆ ಇ ಬಾರಿ ಅರೇಬಿಕಾ ಕಾಫಿ ಬೆಳೆಗಾರರಿಗೆ ಪ್ರಾಕೃತಿಕ ಮುನಿಸು ಕೂಡ ಶಾಪವಾಗಿ ಪರಿಣಮಿಸ ತೊಡಗಿದ್ದು, ಕಾಫಿ ಕೊಯ್ಲಿನ ಪ್ರಥಮ ದಿನಗಳಲ್ಲಿಯೇ ತಾಲ್ಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ, ಕಾಫಿ ಕೊಯ್ದು ಒಣಗಿಸಲು ಕಣದಲ್ಲಿ ಹರಡಿದ್ದ ಕಾಫಿ ಎಲ್ಲವು ಅಕಾಲಿಕ ಮಳೆಗೆ ಸಿಲುಕಿ, ಗುಣಮಟ್ಟದಲ್ಲಿ ಹಿಂಜರಿಕೆ ಕಂಡು ನಷ್ಟ ಉಂಟು ಮಾಡಿದರೆ, ಹದವಾಗಿಯೇ ಸುರಿದ ಅಕಾಲಿಕ ಮಳೆಯಿಂದಾಗಿ, ಅರೇಬಿಕಾ ಕಾಫಿ ಕೊಯ್ಲು ಮುಗಿಯುವ ಮೊದಲೇ ಮುಂದಿನ ಸಾಲಿಗೆ ಕಾಫಿ ಹೂವಾಗ ತೊಡಗಿರುವುದು, ರೈತರಿಗೆ ದಿಕ್ಕೆ ತೋಚದಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.
ಈಗ ಹಣ್ಣಾಗಿರುವ ಕಾಫಿಯನ್ನು ಕಟಾವು ಮಾಡಿದರೆ, ಹೂವುಗಳು ನಷ್ಟವಾಗುವುದರಿಂದ ಮುಂದಿನ ಸಾಲಿಗೆ ಫಸಲು ಕನಸಾಗುತ್ತದೆ, ಮೊಗ್ಗಾಗಿರುವ ಕಾಫಿಯನ್ನು ಅರಳಲು ಬಿಟ್ಟರೆ, ಹಣ್ಣಾಗಿರುವ ಕಾಫಿ ಉದುರಿ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತದೆ. ಮೊದಲೇ ದುಬಾರಿಗೊಂಡಿರುವ ಅರೇಬಿಕಾ ಕಾಫಿ ಬೆಳೆಯ ಉತ್ಪಾದನೆ, ಈಗ ಏಕ ಕಾಲದಲ್ಲಿ ರೈತರಿಗೆ ಪರೀಕ್ಷೆ ಒಡ್ಡುತ್ತಿರುವ ಹೂವು – ಹಣ್ಣುಗಳಿಂದಾಗಿ ರೈತರನ್ನು ತ್ರಿಶಂಕು ಸ್ಥಿತಿಯಲ್ಲಿ ನಿಲ್ಲಿಸಿವೆ. ಹಣ್ಣಾಗಿರುವ ಕಾಫಿಯನ್ನು ಕೊಯ್ಯದೇ ಬಿಡಲಾಗದ ಸ್ಥಿತಿಯಿಂದಾಗಿ, ಮುಂದಿನ ಸಾಲಿನಲ್ಲಿ ತಾಲ್ಲೂಕಿನ ಅರೇಬಿಕಾ ಕಾಫಿ ಬೆಲೆ ಉತ್ಪಾದನೆಯಲ್ಲಿ ಕುಂಠಿತಗೊಳ್ಳುವ ಎಲ್ಲ ಲಕ್ಷಣಗಳು ಕಾಫಿ ಬೆಳೆಯ ಮೊದಲ ದಿನಗಳಲ್ಲಿಯೇ ಗೋಚರಿಸುತ್ತಿದೆ.
‘ನಮಗೆ ಅರೇಬಿಕಾ ಕಾಫಿ ಬೆಲೆದಿರುವುದೇ ಶಾಪವೇನೋ ಎಂಬಂತೆ ಬಾಸವಾಗುತ್ತಿದ್ದು, ಕಳೆದ ಆರು ವರ್ಷಗಳ ಹಿಂದೆ ತೋಟ ನಿರ್ಮಿಸಿ, ಆರು ವರ್ಷಗಳಿಂದ ಮಕ್ಕಳಂತೆ ಸಾಕಿ, ಸಲುಹಿ, ಇದೀಗ ಫಸಲು ಕಾಣುವ ದಿನಗಳಲ್ಲಿ ಅರೇಬಿಕಾ ಮತ್ತು ರೋಬಾಸ್ಟ ಬೆಲೆಯಲ್ಲಿ ಹೆಚ್ಚು ಕಡಿಮೆ ಏಕತೆ ಕಾಣುತ್ತಿರುವುದೇ ದೊಡ್ಡ ನಷ್ಟವಾಗಿದೆ, ಅಂತಹದರಲ್ಲಿ ಈ ಬಾರಿ ಅಕಾಲಿಕ ಮಳೆ, ಅರೇಬಿಕಾ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಇಂದರಿಂದಾಗ ಅರೇಬಿಕಾ ಗಿಡಗಳನ್ನು ತೆರವುಗೊಳಿಸಿ, ರೋಬಾಸ್ಟಾ ಬೆಳೆಯುವುದೇ, ಅರೇಬಿಕಾದಲ್ಲಿಯೇ ಮುಂದುವರೆಯುವುದೇ ಎಂಬ ಸಂದಿಗ್ಧತೆ ಏರ್ಪಟ್ಟಿದೆ’ ಎನ್ನುತ್ತಾರೆ ರೈತ ಕಿರಣ್.
ಅರೇಬಿಕಾ ಕಾಫಿಯನ್ನು ನಂಬಿರುವ ರೈತರು ಅವಕಾಶಗಳ ಸದ್ಭಳಕೆಗೊಳಿಸಿಕೊಂಡು, ಅರೇಬಿಕಾದೊಂದಿಗೆ ಉಪ ಬೆಳೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿದರೆ, ಅರೇಬಿಕಾದಿಂದ ಉಂಟಾಗುತ್ತಿರುವ ನಷ್ಟದಿಂದ ಹೊರಬರಲು, ಪ್ರವಾಹಕ್ಕೆ ಸಿಲುಕಿದವನಿಗೆ ಹುಲ್ಲುಕಡ್ಡಿ ನೆರವಾದಂತಾಗುತ್ತದೆ.
–- ಕೆ.ವಾಸುದೇವ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.